ವ್ಯಕ್ತಿಯೊಬ್ಬನು ದಿನನಿತ್ಯ ದೇವರ ಹೆಸರನ್ನು ಒಂದೇ ಸಮನೆ ಮತ್ತೆ ಮತ್ತೆ ಉಚ್ಚರಿಸುವ ಜಪದಿಂದ; ಒಂದೆಡೆ ನಿಂತು, ಕುಳಿತು ಮಾಡುವ ತಪಸ್ಸಿನಿಂದ; ಉಸಿರನ್ನು ಒಳಗೆ ಎಳೆದುಕೊಂಡು, ನಾನಾ ರೀತಿಗಳಲ್ಲಿ ಹೊರಕ್ಕೆ ಬಿಡುತ್ತಾ ಜತೆಜತೆಯಲ್ಲೇ ದೇಹದ ಅಂಗಾಂಗಗಳನ್ನು ಅತ್ತಿತ್ತ ಆಡಿಸುವ ಯೋಗದಿಂದ ಮಾನವ ಸಮುದಾಯವು ಉಳಿದು ಬೆಳೆದು ಬಾಳುವುದಕ್ಕೆ ಅಗತ್ಯವಾದ ಅನ್ನ, ಬಟ್ಟೆ, ವಸತಿ, ಉದ್ಯೋಗ, ವಿದ್ಯೆ, ಆರೋಗ್ಯ ದೊರಕುವುದಿಲ್ಲ. ಆದರೆ ರೈತನು ತನ್ನ ನೆತ್ತರನ್ನು ಬಸಿದು, ಬೆವರನ್ನು ಹರಿಸಿ ಮಾಡುವ ಬೇಸಾಯದಿಂದ ಇಡೀ ಜಗತ್ತು ಇವೆಲ್ಲವನ್ನೂ ಪಡೆಯುತ್ತಿದೆ. ಆದುದರಿಂದ ರೈತನ ಕಾಯಕದ ಮಹತ್ವವನ್ನು ನಮ್ಮ ಆಳುವ ವರ್ಗ ಅರಿಯಲಿ.