‘ಅತ್ತೆಯ ಮೇಲಿನ ಕೋಪ ಕೊತ್ತಿಯ ಮೇಲೆ’ ಎಂಬಂತೆ ಸಿದ್ದರಾಮಯ್ಯನವರ ಮೇಲಿನ ರಾಜಕೀಯ ದ್ವೇಷವನ್ನು ಇಂದಿರಾ ಕ್ಯಾಂಟೀನ್ ಮೇಲೆ ಚಲಾಯಿಸಿ, ಮುಖ್ಯಮಂತ್ರಿ ಯಡಿಯೂರಪ್ಪನವರು ದುರ್ಬಲ ವರ್ಗಗಳ ‘ಅನ್ನಭಾಗ್ಯ’ದ ತುತ್ತನ್ನು ಕಿತ್ತುಕೊಳ್ಳುವ ರಾಜಕೀಯವನ್ನು ಮಾಡುತ್ತಿದ್ದಾರೆ ಎಂದು ‘ಇಂದಿರಾ ಕ್ಯಾಂಟೀನ್’ನ ಆಹಾರ ವಂಚಿತರು ದೂಷಿಸುತ್ತಿದ್ದಾರೆ. ಕೊರೊನಾ ಸಂಕಷ್ಟ ಕಾಲದಲ್ಲಿ ದಿನಗೂಲಿಯೂ ಸಿಗದೆ ಹಸಿವಿನಿಂದ ಕಂಗಾಲಾಗಿದ್ದ ಅಸಂಖ್ಯಾತ ದುರ್ಬಲ ವರ್ಗದ ಶ್ರಮಜೀವಿಗಳಿಗೆ ಅಗ್ಗದ ಬೆಲೆಯಲ್ಲಿ ದೊರಕುತ್ತಿದ್ದ ಇಂದಿರಾ ಕ್ಯಾಂಟೀನ್ ಆಹಾರ ಜೀವನಾಧಾರವಾಗಿತ್ತು. ಆದರೆ ಈಗ ರಾಜ್ಯ ಸರ್ಕಾರದ ಅನಾದರ ಹಾಗೂ ವಿರೋಧ ಪಕ್ಷದ ಮೇಲಿನ ಅದರ ರಾಜಕೀಯ ದ್ವೇಷದಿಂದಾಗಿ ನಿರ್ಗತಿಕರು ನರಳುವಂತಾಗಿದೆ.