ನಮ್ಮಲ್ಲಿ ಕೆಲವು ದೃಶ್ಯ ಮತ್ತು ಮುದ್ರಣ ಮಾಧ್ಯಮಗಳಲ್ಲಿ ಕರಾವಳಿ ಜಿಲ್ಲೆಗಳನ್ನು ಉಲ್ಲೇಖಿಸುವಾಗ ಮಂಗಳೂರು ಮತ್ತು ಉಡುಪಿ ಜಿಲ್ಲೆಗಳು ಮಾತ್ರ ಕಾಣುತ್ತವೆ. ಮಲೆನಾಡು ಶಿವಮೊಗ್ಗ ಜಿಲ್ಲೆಯ ತಾಳಗುಪ್ಪಾದವರೆಗೆ ಮಾತ್ರ ಇದ್ದರೆ, ಬಯಲುಸೀಮೆಯು ಹಾವೇರಿ ಅಥವಾ ಹುಬ್ಬಳ್ಳಿವರೆಗೆ ಮಾತ್ರ ಇರುತ್ತದೆ. ಮುಂಬೈ ಕರ್ನಾಟಕವನ್ನು ಇತ್ತೀಚೆಗೆ ಕಿತ್ತೂರು ಕರ್ನಾಟಕ ಎಂದು ಹೆಸರಿಸುವಾಗ ಉತ್ತರ ಕನ್ನಡ ಜಿಲ್ಲೆಯನ್ನು ಪರಿಗಣಿಸಲಿಲ್ಲ ಮತ್ತು ಅಭಿಪ್ರಾಯವನ್ನೂ ಕೇಳಲಿಲ್ಲ. ಬಂದರು ಮತ್ತು ಸಮುದ್ರದ ಬಗೆಗೆ ಬರೆಯುವಾಗ ಕಾರವಾರದ ಕರಾವಳಿ ತೀರ ಕಾಣುವುದಿಲ್ಲ. ನೈರುತ್ಯ ರೈಲ್ವೆ ಬಗೆಗೆ ಬರೆಯವಾಗ ಅದು ಹುಬ್ಬಳ್ಳಿಗೆ ನಿಂತು ಹೋಗುತ್ತದೆ. ಉತ್ತರ ಕರ್ನಾಟಕಕ್ಕೆ ಯಾವುದೇ ಹೊಸ ಯೋಜನೆ ಬಂದರೂ ಅದು ಹುಬ್ಬಳ್ಳಿ- ಬೆಳಗಾವಿ ಗಡಿಯನ್ನು ದಾಟುವುದಿಲ್ಲ. ಉತ್ತರ ಕನ್ನಡದ ‘ಅಲ್ಲೂ ಇಲ್ಲ... ಇಲ್ಲೂ ಇಲ್ಲ’ ಎನ್ನುವ ಸ್ಥಿತಿ ನೋಡಿ ಹಳೆಯ ತಲೆಮಾರಿನವರು ‘ನಾವು ಕರ್ನಾಟಕ ರಾಜ್ಯದಲ್ಲಿ ಎಲ್ಲಿ ಇದ್ದೇವೆ’ ಎಂದು ಕೇಳುವಂತಾಗಿದೆ.