ಇಲ್ಲಿ ಪ್ರಶ್ನೆ: ಇದು ಯಾವ ಪರಿಭಾಷೆ? ಇದು ಜನತಂತ್ರ ಪರಿಭಾಷೆಯಲ್ಲ. ಈ ಕಾಯ್ದೆಗಳು ನಮ್ಮ ರೈತಾಪಿ ವರ್ಗವನ್ನು, ವಿಶೇಷವಾಗಿ ಒಟ್ಟು ಭೂಹಿಡುವಳಿಗಳಲ್ಲಿ ಶೇ 85ರಷ್ಟಿರುವ ಅತಿಸಣ್ಣ ಮತ್ತು ಸಣ್ಣ ಭೂಹಿಡುವಳಿದಾರ ರನ್ನು ನಿರ್ನಾಮ ಮಾಡಿಬಿಡುತ್ತವೆ. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಸರ್ಕಾರಗಳು, ಅದರಲ್ಲಿಯೂ ಕರ್ನಾಟಕದಲ್ಲಿ ಅರಸು ನೇತೃತ್ವದಲ್ಲಿ ಜಮೀನ್ದಾರಿ ಪಾಳೆಗಾರಿಕೆಯನ್ನು ತೊಡೆದುಹಾಕಲು ಪ್ರಯತ್ನ ನಡೆಸಲಾಗಿತ್ತು. ಈಗ ಮತ್ತೆ ಅದೇ ಜಮೀನ್ದಾರಿ ಪಾಳೆಗಾರಿಕೆಯನ್ನು ಪುನರ್ಸ್ಥಾಪಿಸಲು ಸರ್ಕಾರ ಕಟಿಬದ್ಧವಾಗಿರುವಂತೆ ಕಾಣುತ್ತದೆ. ಇದನ್ನು ನಾವು ತೀವ್ರವಾಗಿ ವಿರೋಧಿಸಬೇಕು.