ಸ್ಮಾರ್ಟ್ ಸಿಟಿ ಯೋಜನೆಯಡಿ ಕರ್ನಾಟಕದ ನಗರಗಳು ಅಭಿವೃದ್ಧಿ ಆಗುತ್ತವೆಂದು ತಿಳಿದಾಗ ಸಂತೋಷವಾಗಿತ್ತು. ನಮ್ಮ ನಗರಗಳು ಸಿಂಗಪುರ ಮತ್ತು ಹಾಂಗ್ಕಾಂಗ್ನಂತೆ ಸ್ವಚ್ಛವಾಗಿ ನಳನಳಿಸುವಂತೆ ಕನಸು ಕಂಡಿದ್ದೆವು. ಯೋಜನೆಯಡಿ ಕಾಮಗಾರಿಗಳು ಪ್ರಾರಂಭವಾದಾಗ ಕೌತುಕದಿಂದ ಹುಬ್ಬೇರಿಸಿ, ಎದೆಯೇರಿಸಿ ಸಂಭ್ರಮಿಸಿದ್ದೆವು. ಕಾಮಗಾರಿ ಮುಂದುವರಿದಂತೆ ಅದರ ಆಮೆ ವೇಗದ ಪ್ರಗತಿಯಿಂದ ಅನನುಕೂಲಗಳನ್ನು ಅನುಭವಿಸಿದಂತೆ ನಮ್ಮ ಸಂಭ್ರಮ, ಸಂತಸ, ಕುತೂಹಲ ಮತ್ತು ಕನಸುಗಳು ಒಂದೊಂದಾಗಿ ಮರೆಯಾಗತೊಡಗಿದವು. ಈಗ ನಿರಾಸೆ ಮತ್ತು ಅಸಹನೆ ಮಡುಗಟ್ಟಿವೆ.