ತೇಜಸ್ವಿಯವರು ಕುವೆಂಪು ಅವರ ಕುರಿತು ‘ಕುವೆಂಪುರವರ ಸಾಮಾಜಿಕ ಕಳಕಳಿ, ಸುಧಾರಣಾ ದೃಷ್ಟಿ, ವಿಚಾರಶೀಲತೆ ಮೊದಲಾದ ಕ್ರಾಂತಿಕಾರಿ ವ್ಯಕ್ತಿತ್ವವನ್ನು ಮರೆತು ಅವರನ್ನು ಕೇವಲ ಕವಿ ಹಾಗೂ ಕಲಾವಿದ ಎನ್ನುವ ನೆಲೆಗಟ್ಟಿನಲ್ಲೇ ನಾವು ಗುರುತಿಸುತ್ತಾ ಹೋದರೆ ಅವರ ಅಂತಃಸತ್ವವನ್ನು ತಪ್ಪಾಗಿ ಪ್ರತಿನಿಧಿಸಿದಂತೆ’ ಎಂದು ಹೇಳಿದ್ದರು. ತೇಜಸ್ವಿಯವರು ತೀರಿಹೋಗಿ 14 ವರ್ಷಗಳು ಕಳೆದರೂ ಕುವೆಂಪು ಅವರ ತತ್ವಾದರ್ಶಗಳು ನಮಗೆ ನಿಗೂಢವಾಗಿಯೇ ಉಳಿದಿವೆ. ಕುವೆಂಪು ಪ್ರತಿಪಾದಿಸಿದ ವಿಶ್ವಮಾನವ ಸಂದೇಶವು ಬಹು ದೊಡ್ಡ ಚಿಂತನೆಯಾಗಿದೆ. ಈಗಿರುವ ಧರ್ಮಾಂಧತೆ, ಜಾತೀಯತೆಯಿಂದ ಹೊರಬಂದು ಮನುಜಮತವೊಂದೇ ಸಾಕು ಎಂಬ ಹೆಬ್ಬಯಕೆ ಅದರಲ್ಲಿ ಅಡಕವಾಗಿದೆ. ಕುವೆಂಪು ಅವರು ಪ್ರಕೃತಿ ಕುರಿತು ರಚಿಸಿದ ಕವನಗಳನ್ನು ಇಂದು ಪಠ್ಯದಲ್ಲಿ ಕಾಣುತ್ತಿ
ದ್ದೇವೆಯೇ ವಿನಾ ಅವರ ವಿಚಾರಗಳು ಅಥವಾ ಚಿಂತನಶೀಲ ವಿಚಾರಧಾರೆಗಳನ್ನಲ್ಲ. ಅವರ ವಿಚಾರಧಾರೆಗಳು ಆದಷ್ಟು ಬೇಗ ಯುವಪೀಳಿಗೆಯನ್ನು ತಲುಪುವಂತಾಗಲಿ.