ಸ್ವಾತಂತ್ರ್ಯೋತ್ಸವದಂದು ದೆಹಲಿಯ ಕೆಂಪುಕೋಟೆಯಿಂದ ಮಾತನಾಡಿದ ಪ್ರಧಾನಿ, ಭ್ರಷ್ಟಾಚಾರದ ವಿರುದ್ಧ ಯುದ್ಧ ಸಾರಿದ್ದಾರೆ. ಈ ಯುದ್ಧವನ್ನು ಅವರು ಕರ್ನಾಟಕದಿಂದ ಪ್ರಾರಂಭಿಸಲಿ. ಮೊದಲು ಪಕ್ಷದಲ್ಲಿ ಧಂಡಿಯಾಗಿ ಸಂಗ್ರಹವಾಗಿರುವ ಕೊಳಕುಗಳನ್ನು, ಹಳಸಿದವರನ್ನು ಮುಲಾಜಿಲ್ಲದೆ ತೆಗೆದುಹಾಕುವ ಪ್ರಕ್ರಿಯೆಯಿಂದ ಬಿಜೆಪಿಯ ಶುದ್ಧೀಕರಣವನ್ನು ಪ್ರಾರಂಭಿಸುವುದು ಮುಖ್ಯ. ಪ್ರಧಾನಿಈ ಬಗ್ಗೆ ಸಂದೇಹಾತೀತವಾದ ಆದೇಶವನ್ನು ಪಕ್ಷಕ್ಕೆ ನೀಡುವುದಲ್ಲದೆ, ಅದರ ಅನುಷ್ಠಾನದ ಬಗ್ಗೆ ನಿಗಾ ವಹಿಸಬೇಕು. ಅದರಿಂದ, ಪಕ್ಷದ ವರ್ಚಸ್ಸನ್ನು ಹೆಚ್ಚಿಸಲು ಸಾಧ್ಯ. ಇದಾದಾಗ ಆಡಳಿತ ನೇರ್ಪುಗೊಳ್ಳುತ್ತದೆ. ಜನರಲ್ಲಿ ಭರವಸೆ ಮೂಡುತ್ತದೆ. ಆಸೆ, ಅಪೇಕ್ಷೆಗಳು ಬೇಕಾದಷ್ಟಿವೆ. ಅವುಗಳನ್ನು ಪ್ರಾಮಾಣಿಕವಾಗಿ ಮತ್ತು ನಿಷ್ಠೆಯಿಂದ ಪೂರೈಸುವವರು ಎಲ್ಲಿದ್ದಾರೆ? ಇದು ಈಗ ಜನರ ಮುಂದಿರುವ ಪ್ರಶ್ನೆ.