ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗೆ ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ಪರೀಕ್ಷೆಯಲ್ಲಿ ಸಂದರ್ಶನದ ಅಂಕಗಳನ್ನು ಕಡಿತಗೊಳಿಸಿರುವುದಕ್ಕೆ ವಿಧಾನ ಮಂಡಲದ ಕಲಾಪದಲ್ಲಿ ಕೆಲವು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿರುವುದು ಸರಿಯಲ್ಲ. ಸರ್ಕಾರದ ಈ ಕ್ರಮದಿಂದ ಗ್ರಾಮೀಣ ಮತ್ತು ದುರ್ಬಲ ವರ್ಗಗಳ ಅಭ್ಯರ್ಥಿಗಳಿಗೆ ತೊಂದರೆ ಆಗಲಿದೆ. ಹೀಗಾಗಿ ಈ ನಿರ್ಧಾರವನ್ನು ಕೈಬಿಡಬೇಕು ಎಂದು ಸದಸ್ಯರು ಒತ್ತಾಯಿಸಿದ್ದಾರೆ. ಈ ವಾದದಲ್ಲಿ ಹುರುಳಿಲ್ಲ. ಆಯೋಗವು ನಡೆಸುವ ಸಂದರ್ಶನಗಳಲ್ಲಿ ಯಾವ ಮಟ್ಟದ ಭ್ರಷ್ಟಾಚಾರ, ಅಕ್ರಮಗಳು ನಡೆಯುತ್ತವೆ ಎಂಬುದು ಗುಟ್ಟಾದ ವಿಷಯವೇನೂ ಅಲ್ಲ. ಸಂದರ್ಶನಕ್ಕೆ ಹೆಚ್ಚು ಅಂಕಗಳು ನಿಗದಿಯಾದರೆ ಭ್ರಷ್ಟಾಚಾರ, ಅಕ್ರಮಗಳಿಗೆ ಹೆಚ್ಚಿನ ಅವಕಾಶ ಮಾಡಿಕೊಟ್ಟಂತೆ ಆಗುತ್ತದೆ. ಜೊತೆಗೆ ಹಣಬಲ ಮತ್ತು ರಾಜಕೀಯ ಪ್ರಭಾವವಿರುವ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗುವ ಸಂಭವ ಇರುತ್ತದೆ.
ಸಂದರ್ಶನಕ್ಕೆ ಹೆಚ್ಚಿನ ಅಂಕಗಳು ನಿಗದಿಯಾದರೆ ಪ್ರತಿಭಾವಂತ ಗ್ರಾಮೀಣ ಮತ್ತು ಮೆರಿಟ್ ವಿದ್ಯಾರ್ಥಿಗಳ ಆಯ್ಕೆಗೆ ಮಾರಕವಾಗುತ್ತದೆ. ಆದ್ದರಿಂದ ರಾಜ್ಯ ಸರ್ಕಾರವು ಯಾವುದೇ ರೀತಿಯ ಸ್ಥಾಪಿತ ಹಿತಾಸಕ್ತಿಗಳ ಒತ್ತಡಕ್ಕೆ ಮಣಿಯದೆ, ಪ್ರಸ್ತುತ ಅಧಿಸೂಚನೆಯಲ್ಲಿ ಹೊರಡಿಸಿರುವ ತಿದ್ದುಪಡಿ ಅಂಶಗಳನ್ನು ಮುಂದಿನ ನೇಮಕಾತಿಯಲ್ಲಿ ಅಳವಡಿಸಿಕೊಳ್ಳಬೇಕು.