ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಹಿನ್ನೆಲೆಯಲ್ಲಿ ಮರುಪರೀಕ್ಷೆ ನಡೆಸುವ ಸರ್ಕಾರದ ನಿರ್ಧಾರದಿಂದ, ನ್ಯಾಯಯುತವಾಗಿ ಆಯ್ಕೆಯಾದ ಪ್ರತಿಭಾವಂತ ಅಭ್ಯರ್ಥಿಗಳಿಗೆ ಖಂಡಿತ ಅನ್ಯಾಯವಾಗುತ್ತದೆ. ಮನೆಯ ಜವಾಬ್ದಾರಿ ಹೊರುವ ವಯಸ್ಸಿನಲ್ಲಿ ಸರ್ಕಾರಿ ಹುದ್ದೆಯ ಕನಸನ್ನು ಹೊತ್ತು, ಸ್ನೇಹಿತರ ಜತೆ ರೂಮ್ನಲ್ಲಿ ಇದ್ದುಕೊಂಡು, ಆರ್ಥಿಕ ಸಂಕಷ್ಟಗಳ ನಡುವೆಯೇ ಹಗಲು ರಾತ್ರಿ ಎನ್ನದೆ ಮೂರ್ನಾಲ್ಕು ವರ್ಷಗಳಿಂದ ಓದಿದವರಿದ್ದಾರೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಈ ಸಂಬಂಧ ಸುಮಾರು 10 ವರ್ಷಗಳಲ್ಲಿ ನಡೆಸಿರುವ ಪರೀಕ್ಷೆಗಳಲ್ಲೇ ಅತಿ ಕಷ್ಟವಾದ ಪೇಪರ್ ಇದಾಗಿದ್ದು, ಇದೊಂದು ಮಿನಿ ಯುಪಿಎಸ್ಸಿ ಪರೀಕ್ಷೆ ಎಂದೇ ನಾವು ಸ್ಪರ್ಧಾರ್ಥಿಗಳು ಮಾತನಾಡಿಕೊಂಡಿದ್ದೆವು. ಈಗ ಆಯ್ಕೆಯಾದವರಲ್ಲಿ ಯುಪಿಎಸ್ಸಿ, ಕೆಎಎಸ್ಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳೇ ಹೆಚ್ಚಿನವರಾಗಿದ್ದಾರೆ.