ಹೀಗೆ ನಮ್ಮ ನಾಡಿನ ಅನೇಕ ಜ್ವಲಂತ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ವಿಚಾರ ಸಂಕಿರಣಗಳನ್ನು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಏರ್ಪಡಿಸಬೇಕು. ಈ ರೀತಿಯ ಸಮಸ್ಯೆಗಳನ್ನು ಪರಿಹರಿಸುವ ದಿಸೆಯಲ್ಲಿ ನಮ್ಮ ಲೇಖಕರು ಸಹ ಸಂಶೋಧನಾತ್ಮಕ ಪುಸ್ತಕಗಳನ್ನು ಬರೆದು ಪ್ರಕಟಿಸಬೇಕು. ಲಕ್ಷಾಂತರ ಕನ್ನಡಿಗರು ಒಂದು ಕಡೆ ಸೇರುವ, ಪರಸ್ಪರ ಸ್ನೇಹ, ವಿಶ್ವಾಸ ಗಳಿಸುವ ನಮ್ಮ ಸಾಹಿತ್ಯ ಸಮ್ಮೇಳನಗಳು ನಾಡಿನ ಜ್ವಲಂತ ಸಮಸ್ಯೆಗಳನ್ನು ಸಹ ಚರ್ಚಿಸಿ ಅರಿವು ಪಡೆಯುವಂತಾಗಬೇಕು. ಅದೇ ನಿಜಕ್ಕೂ ಸಾಹಿತ್ಯ ಸಮ್ಮೇಳನದ ಸಾರ್ಥಕ್ಯವಾಗಬೇಕು.