ಉತ್ತರಪ್ರದೇಶದ ಅಲಿಗಡ ಪಟ್ಟಣದಲ್ಲಿ ಭಾನುವಾರ ನಡೆದ ಧಾರ್ಮಿಕ ಸಭೆಯಲ್ಲಿ, ಕಾಳಿಚರಣ್ ಮಹಾರಾಜ್ ಸ್ವಾಮೀಜಿ ಮತ್ತು ನರಸಿಂಹಾನಂದ ಸರಸ್ವತಿ ಅವರು ‘ಹಿಂದೂ ಧರ್ಮೀಯರು ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಹೆರಬೇಕು’ ಎಂದು ಕಾರ್ಯಸಾಧುವಲ್ಲದ ಮತ್ತು ಸರ್ಕಾರದ ನೀತಿಗೆ ವಿರುದ್ಧವಾದ ಹೇಳಿಕೆ ನೀಡಿರುವುದು ವರದಿಯಾಗಿದೆ (ಪ್ರ.ವಾ., ಮೇ 3). ಬೇರೆ ಬೇರೆ ಸ್ವಾಮೀಜಿಗಳು ಹಾಗೂ ಸ್ವಯಂಘೋಷಿತ ಮುಖಂಡರು ಆಗಾಗ್ಗೆ ಇಂಥ ಹೇಳಿಕೆಗಳನ್ನು ನೀಡುತ್ತಲೇ ಇರುತ್ತಾರೆ. ಒಂದು ಮಗುವಿನ ಪಾಲನೆ- ಪೋಷಣೆ, ಆರೋಗ್ಯ, ಶಿಕ್ಷಣ, ಉದ್ಯೋಗ ಎಷ್ಟು ಕಷ್ಟ ಎಂಬುದು ಸಂಸಾರಿಗಳಿಗೆ ಗೊತ್ತೇ ವಿನಾ ಸಂಸಾರ ತ್ಯಜಿಸಿರುವ ಸ್ವಾಮೀಜಿಗಳಿಗೆ ಗೊತ್ತಾಗುವುದಿಲ್ಲ.