ತಮಿಳುನಾಡಿನಲ್ಲಿ ಪೊಲೀಸ್ ವಶದಲ್ಲಿದ್ದಾಗಲೇ ತಂದೆ ಮತ್ತು ಮಗ ಮೃತರಾದ ಸುದ್ದಿ ಹೊರಬಿದ್ದ ಬೆನ್ನಿಗೇ ಮತ್ತೊಂದು ಕಸ್ಟಡಿ ಸಾವು ವರದಿಯಾಗಿರುವುದು ಅತ್ಯಂತ ನೋವಿನ ಸಂಗತಿ. ಸಮಾಜದ ರಕ್ಷಕರೇ ಇಂತಹ ಅಮಾನವೀಯ ಕೃತ್ಯಕ್ಕೆ ಕಾರಣರಾಗುವುದು ಸ್ವಸ್ಥ ಸಮಾಜದ ಲಕ್ಷಣವಲ್ಲ. ಮಾನವ ಹಕ್ಕಿನ ಉಲ್ಲಂಘನೆಯಂತಹ ಈ ಬಗೆಯ ಘಟನೆಗಳು ಪೊಲೀಸ್ ಇಲಾಖೆಯ ಗೌರವಕ್ಕೆ ಕುತ್ತು ತರುತ್ತವೆ. ಇಲಾಖೆ ಎಚ್ಚೆತ್ತುಕೊಳ್ಳಬೇಕು. ಇಲ್ಲವಾದರೆ ಅಮೆರಿಕದಲ್ಲಿ ನಡೆಯುತ್ತಿರುವಂತೆ ಪೊಲೀಸ್ ವಿರೋಧಿ ಹೋರಾಟಗಳು ಇಲ್ಲಿಯೂ ಹುಟ್ಟುವುದರಲ್ಲಿ ಅನುಮಾನವಿಲ್ಲ. ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರವೇ ಹೊರತು ಪೊಲೀಸ್ ರಾಷ್ಟ್ರವಲ್ಲ ಎಂಬುದನ್ನು ನೆನಪಿನಲ್ಲಿಡುವುದು ಸೂಕ್ತ.