ತೆಲಂಗಾಣದ ಮುನುಗೋಡು ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷಾಂತರಗೊಂಡು ಸ್ಪರ್ಧಿಸಿದ್ದ ಅಭ್ಯರ್ಥಿ ಸೋಲು ಕಂಡಿ ರುವುದು ಇತರ ಪಕ್ಷಾಂತರಿಗಳಿಗೆ ಎಚ್ಚರಿಕೆಯ ಗಂಟೆ ಎಂದು ಹುರುಕಡ್ಲಿ ಶಿವಕುಮಾರ ಅವರ ಹೇಳಿರುವುದರಲ್ಲಿ (ವಾ.ವಾ., ನ. 8) ತುಸು ಪ್ರಮಾದ ಇದೆ. ಈ ಫಲಿತಾಂಶ ಪಕ್ಷಾಂತರಕ್ಕೆ ಪಾಠವೇನೋ ಸರಿ. ಆದರೆ, ಮುನುಗೋಡು ಕ್ಷೇತ್ರದಲ್ಲಿ ಆಡಳಿತ ಪಕ್ಷವು ತನ್ನ ಪ್ರತಿಷ್ಠೆಯನ್ನೇ ಪಣಕ್ಕಿಟ್ಟು ಗೆಲುವು ಸಾಧಿಸಿದ್ದು ಪ್ರಜಾಪ್ರಭುತ್ವದ ಬಲದಿಂದಲ್ಲ. ನೂರಾರು ಕೋಟಿ ರೂಪಾಯಿ ಚೆಲ್ಲಿದ್ದರ ಬಲದಿಂದ ಎಂಬ ವರದಿಗಳೂ ಇವೆ. ಹೀಗಾಗಿ, ಪಕ್ಷಾಂತರದ ಪಾಪ ತೊಳೆದದ್ದು ಮತದಾರನ ಪುಣ್ಯದ ಫಲದಿಂದೇನಲ್ಲ, ಹಣದಾಸೆಯ ಮತ್ತೊಂದು ಪಾಪದಿಂದ ಎನ್ನಬಹುದು. ಈ ಹಣವನ್ನು ಪಡೆದವರು ಅಮಾಯಕರೂ ಅಬೋಧರೂ ಏನಲ್ಲ. ಯಥಾರಾಜಾ ತಥಾಪ್ರಜಾ ಎಂಬುದು ಯಥಾಪ್ರಜಾ ತಥಾರಾಜಾ ಎಂದಾದ ವಿದ್ಯಮಾನದಲ್ಲಿ, ರಾಜಕಾರಣದ ಅಸಹ್ಯಗಳಿಂದ ಪ್ರಜಾಬಾಧ್ಯತೆಯನ್ನು ಹೊರಗಿಡುವುದು ಸಲ್ಲದು.