ಭ್ರಷ್ಟಾಚಾರ, ಹಿಂಸೆ, ದರೋಡೆ, ಸುಲಿಗೆ, ಮೋಸ, ಹಸುಳೆಗಳ ಮೇಲೆ ಲೈಂಗಿಕ ದೌರ್ಜನ್ಯ ಇಂದು ಹೆಚ್ಚಾಗಲು ಶಿಕ್ಷಣದ ವೈಫಲ್ಯ ಕಾರಣ ಎನ್ನಲು ಅಡ್ಡಿಯಿಲ್ಲ. ಗುಣಮಟ್ಟದ ಶಿಕ್ಷಣ ಎಲ್ಲರಿಗೂ ದೊರೆಯಬೇಕು. ಅದಕ್ಕಾಗಿ ಪ್ರತೀ ತರಗತಿಯ ಪ್ರವೇಶ ಸಂಖ್ಯೆಯನ್ನು ಮಿತಿಗೆ ಒಳಪಡಿಸಬೇಕು. ಶಿಕ್ಷಕ-ವಿದ್ಯಾರ್ಥಿ ಅನುಪಾತವನ್ನು ಈಗಿರುವ 1:70ಕ್ಕೆ ಬದಲಾಗಿ 1:40ಕ್ಕೆ ನಿಗದಿಪಡಿಸಬೇಕು. ಶಿಕ್ಷಕರಿಗೆ ಕಾಲಕಾಲಕ್ಕೆ ತರಬೇತಿ, ಕೌಶಲಗಳ ಬೆಳವಣಿಗೆಗೆ ಅನುವು ಮಾಡಿಕೊಡಬೇಕು. ಅದಕ್ಕಿಂತ ಮುಖ್ಯವಾಗಿ ವಿದ್ಯಾರ್ಥಿಗಳಲ್ಲಿ ಕಲಿಯುವ ಮನಸ್ಸು, ಹುಮ್ಮಸ್ಸನ್ನು ಉದ್ದೀಪನಗೊಳಿಸಬೇಕು. ಇದು ಕಲಿಸುವವರು ಮತ್ತು ಕಲಿಯುವವರನ್ನು ಒಂದು ಕಡೆಗೆ ತರುತ್ತದೆ. ಕೆಲಸ ಸರಳವಾಗುತ್ತದೆ. ಉದ್ದೇಶ ಈಡೇರುತ್ತದೆ. ಶಿಕ್ಷಣದ ಪಾಲುದಾರರು, ಮುಖ್ಯವಾಗಿ ವಿದ್ಯಾರ್ಥಿಗಳು ಮತ್ತು ಪೋಷಕರು, ಸರ್ಕಾರ ಕ್ರಿಯಾಶೀಲ ಆಗಿರಬೇಕು. ಶಿಕ್ಷಣ ರಂಗ ಎಡವಿದರೆ ಎಲ್ಲವೂ ಕೆಡವಲ್ಪಡುತ್ತವೆ.
-ಬಿ.ಆರ್.ಅಣ್ಣಾಸಾಗರ, ಸೇಡಂ