ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ಇತ್ತೀಚೆಗೆ ಕೆಲವು ಸರ್ಕಾರಿ ಅಧಿಕಾರಿಗಳು ಹಾಗೂ ದಲ್ಲಾಳಿಗಳ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿ ಅಪಾರ ಪ್ರಮಾಣದ ನಗದು, ಚಿನ್ನ– ಬೆಳ್ಳಿ ಆಭರಣ ಹಾಗೂ ಆಸ್ತಿಪಾಸ್ತಿಗಳ ದಾಖಲೆ ವಶಪಡಿಸಿಕೊಂಡಿರುವುದರ ಬಗ್ಗೆ ವರದಿಯಾಗಿದೆ. ಈ ಹಿಂದೆಯೂ ಎಸಿಬಿ ಹಲವಾರು ದಾಳಿಗಳನ್ನು ನಡೆಸಿ ಅಕ್ರಮ ಗಳಿಕೆಯನ್ನು ಪತ್ತೆಹಚ್ಚಿದೆ. ಇತ್ತೀಚಿನ ವರ್ಷಗಳಲ್ಲಿ ಎಸಿಬಿ ಸ್ವಲ್ಪಮಟ್ಟಿಗೆ ಚುರುಕುಗೊಂಡಿದೆ ಎಂದು ಹೇಳಬಹುದು. ಆದರೆ, ಎಸಿಬಿ ಹೂಡುವ ಪ್ರಕರಣಗಳಲ್ಲಿ ಶಿಕ್ಷೆಯಾಗುವ ಪ್ರಮಾಣ ಮಾತ್ರ ಅತ್ಯಂತ ಕಡಿಮೆ. ಬಹುತೇಕ ಆರೋಪಿಗಳು ರಾಜಕೀಯ ಪ್ರಭಾವ ಬಳಸಿಕೊಂಡು, ಶಿಕ್ಷೆಯಿಂದ ಪಾರಾಗುತ್ತಾರೆ. ಕೆಲವರು ಮತ್ತೆ ಆಯಕಟ್ಟಿನ ಸ್ಥಳಗಳಲ್ಲಿ ಬಂದು ಕುಳಿತುಕೊಳ್ಳುತ್ತಾರೆ.