ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು 6-18 ವರ್ಷದ ಮಕ್ಕಳಿಗಾಗಿ ‘ಓದುವ ಬೆಳಕು’ ಯೋಜನೆಯನ್ನು ಇದೇ 14ರಂದು ಜಾರಿಗೊಳಿಸಲಿರುವುದು ಶ್ಲಾಘನೀಯ. ಕೋವಿಡ್– 19 ಕಾರಣದಿಂದ ಜೀವನ ಸಾಗಿಸುವುದೇ ಕಷ್ಟವಾಗಿರುವ ಈ ಸಮಯದಲ್ಲಿ ಎಷ್ಟೋ ಪೋಷಕರಿಗೆ ಮೊಬೈಲ್, ಟ್ಯಾಬ್, ಲ್ಯಾಪ್ಟಾಪ್ಗಳನ್ನು ಮಕ್ಕಳಿಗಾಗಿ ಕೊಡಿಸಲಾಗುತ್ತಿಲ್ಲ. ಇದರಿಂದ ಅವರು ಕಲಿಕೆಯಿಂದ ವಿಮುಖರಾಗುತ್ತಿದ್ದಾರೆ. ಇಂತಹ ಸಂಕೀರ್ಣ ಸಮಯದಲ್ಲಿ ಎಲ್ಲ ಪಂಚಾಯಿತಿಗಳಲ್ಲಿ ಈ ಯೋಜನೆಯನ್ನು ಪ್ರಾರಂಭಿಸುತ್ತಿರುವುದು ಮಕ್ಕಳಲ್ಲಿ ಓದುವ ಅಭಿರುಚಿ, ಜ್ಞಾನ ವೃದ್ಧಿ, ಮಾನಸಿಕ ಬೆಳವಣಿಗೆಗೆ ನೆರವಾಗುತ್ತದೆ. ಈ ಯೋಜನೆಯು ಮಕ್ಕಳ ದಿನಾಚರಣೆಯಂದು ಸರ್ಕಾರ ಮಕ್ಕಳಿಗೆ ಕೊಡುವ ಅತ್ಯುತ್ತಮ ಉಡುಗೊರೆಯೇ ಸರಿ.