ಕರ್ನಾಟಕ ಸಾಹಿತ್ಯ ಅಕಾಡೆಮಿಯು ಬೆಂಗಳೂರಿನಲ್ಲಿ ಇತ್ತೀಚೆಗೆ ನಾಡಿನ ಸಾಹಿತಿ, ಲೇಖಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಿತು. ಲಾಕ್ಡೌನ್ ಕಾರಣದಿಂದ 2018, 2019 ಮತ್ತು 2020 ಸೇರಿದಂತೆ ಮೂರು ವರ್ಷದ ಪ್ರಶಸ್ತಿಗಳನ್ನು ಒಟ್ಟಿಗೆ ವಿತರಿಸಿದ್ದರಿಂದ ಸುಮಾರು 80 ಲೇಖಕರು ಆಹ್ವಾನಿತರಾಗಿದ್ದರು. ಅದ್ಧೂರಿಯಿಂದ ನಡೆದ ಸಮಾರಂಭದಲ್ಲಿ ಆದ ಒಂದು ಲೋಪವೆಂದರೆ ಸಚಿವ, ಸಂಸದ, ಮುಖ್ಯ ಅತಿಥಿ, ಸಾಹಿತಿಗಳೂ ಸೇರಿದಂತೆ ಸುಮಾರು 80 ಮಂದಿಗೆ ಪ್ಲಾಸ್ಟಿಕ್ ಹಾರಗಳನ್ನು ಹಾಕಿ ಸನ್ಮಾನಿಸಿದ್ದು. ಪ್ಲಾಸ್ಟಿಕ್ ಹಾರವೊಂದಕ್ಕೆ ಕನಿಷ್ಠ 250 ಗ್ರಾಂನಂತೆ ನೂರಕ್ಕೆ 25 ಕೆ.ಜಿ ಮತ್ತು ನೂರು ಪ್ಲಾಸ್ಟಿಕ್ ತಟ್ಟೆಗಳಿಗೆ ಸರಾಸರಿ ಕನಿಷ್ಠ 1 ತಟ್ಟೆಗೆ 250 ಗ್ರಾಂನಂತೆ ನೂರಕ್ಕೆ 25 ಕೆ.ಜಿ. ಸೇರಿ ಒಟ್ಟು 50 ಕೆ.ಜಿ.ಯಷ್ಟು ಪ್ಲಾಸ್ಟಿಕ್ ಕಸ ಕಡೆಗೆ ಮಣ್ಣು ಸೇರುತ್ತದೆ. ಇದು, ಪ್ಲಾಸ್ಟಿಕ್ಮುಕ್ತ ಭೂಮಿ ಮಾಡಬೇಕೆಂಬ ಪರಿಸರಸ್ನೇಹಿ ನಡೆಗೆ ತದ್ವಿರುದ್ಧ.