ನಿಸಾರ್ ಅವರಿಗೆ ಆತಂಕ ಶುರು. ಯಾವುದರ ಬಗ್ಗೆ ಬರೆಯುವುದು? ಹೇಗಿದ್ದರೂ ನವೆಂಬರ್ ತಿಂಗಳು ಸಮೀಪಿ ಸುತ್ತಿದೆ. ರಾಜ್ಯೋತ್ಸವವನ್ನೇ ನಿಮಿತ್ತವಾಗಿಟ್ಟುಕೊಂಡು ಏಕೆ ಬರೆಯಬಾರದು ಎಂಬ ಜಿಜ್ಞಾಸೆಯ ಫಲವಾಗಿಯೇ ಮೂಡಿಬಂದ ಕವಿತೆ ‘ನಿತ್ಯೋತ್ಸವ’. ಮನೆಯ ಮಹಡಿಯ ಮೇಲೆ ಓಡಾಡುತ್ತಾ ತಾವು ಶಿವಮೊಗ್ಗದ ಸುತ್ತಲೂ ನೋಡಿ ಆನಂದಿಸಿದ ಮಲೆನಾಡಿನ ಸೌಂದರ್ಯ ಮನನಕ್ಕಿಂತ ಬೇರೆ ಬೇಕೆ ಭಾವಗೀತೆಯ ಸಾಂಗತ್ಯಕ್ಕೆ? ಕನ್ನಡ ನಾಡಿನಲ್ಲಿ ಹುದುಗಿರುವ ಭವ್ಯತೆಯೆಲ್ಲಾ ಎರಕ ಹೊಯ್ದಂತೆ ಭಾಸವಾಗುವ ಈ ಕವಿತೆ ಪ್ರತಿಯೊಬ್ಬ ಕನ್ನಡಿಗನ ಭಾವ ಸ್ವರೂಪ ಎಂದು ವರ್ಣಿಸಲಾಗಿದೆ. ನಿಸಾರ್ ಅವರ ನಾಡು, ನುಡಿಯ ಪ್ರೇಮ ಹಲವು ರೀತಿಯಲ್ಲಿ ಅಭಿವ್ಯಕ್ತಗೊಂಡಿದೆ. ‘ಕನ್ನಡವೆಂದರೆ ಬರಿ ನುಡಿಯಲ್ಲ ಹಿರಿದಿದೆ ಅದರರ್ಥ’ ಎಂದು ಕನ್ನಡದ ಶಕ್ತಿಯನ್ನು ಭೇದಿಸಿ ನೋಡಿದವರು. ‘ಕನ್ನಡ ಬರಿ ಕರ್ನಾಟಕಲ್ಲ, ಅಸೀಮ, ಅದು ಅದಿಗಂತ’ ಎಂದು ಪರಿಭಾವಿಸುವಂತೆ ಕರೆ ನೀಡಿದರು. ಎಲ್ಲಕ್ಕಿಂತ ಹೆಚ್ಚಾಗಿ, ‘ಕನ್ನಡವೆಂದರೆ ಜೀವನಶೈಲಿ, ವಿಧಾನ’ ಎಂದು ಭಾವ ದುಂದುಭಿಯನ್ನು ಕನ್ನಡಿಗರ ಮನದಲ್ಲಿ ತೇಲಿಬಿಟ್ಟರು. ಫೆ. 5 ನಿಸಾರ್ ಅವರ ಜನ್ಮದಿನ. ಅವರ ಕುಟುಂಬವರ್ಗ ಹಾಗೂ ಸನ್ಮಿತ್ರರು ಚಿಕ್ಕಬಳ್ಳಾಪುರದಲ್ಲಿ ನಿಸಾರ್ ಅಹಮದ್ ಎಜುಕೇಷನ್ ಟ್ರಸ್ಟ್ನ ಉದ್ಘಾಟನೆ ಹಾಗೂ ನಿಸಾರ್ ಅವರ ಪುತ್ಥಳಿ ಅನಾವರಣಕ್ಕೆ ಆಸ್ಥೆ ವಹಿಸಿದ್ದು ಒಂದು ಉತ್ತಮ ಬೆಳವಣಿಗೆಯೇ ಸರಿ.