ಶರಾವತಿ ಕರ್ಮಕಾಂಡ: ನ್ಯಾಯಾಂಗ ತನಿಖೆಗಾಗಿ ಆಗ್ರಹ– ಸಭಾತ್ಯಾಗ
ಬೆಂಗಳೂರು, ಜೂನ್ 20– ಶರಾವತಿ ‘ಕರ್ಮಕಾಂಡ’ದ ವಿಚಾರಣೆಯಲ್ಲಿ ತನಿಖೆ ನಡೆಸುವ ಬಗ್ಗೆ ತಾವು ತೆರೆದ ಮನಸ್ಸಿನಿಂದ ಇರುವುದಾಗಿ ಮುಖ್ಯಮಂತ್ರಿ ಶ್ರೀಡಿ. ದೇವರಾಜ ಅರಸು ಅವರು ಭರವಸೆ ನೀಡಿದರೂ ನ್ಯಾಯಾಂಗ ವಿಚಾರಣೆಯ ಸ್ಪಷ್ಟ ಭರವಸೆಗಾಗಿ ಒತ್ತಾಯಪಡಿಸಿದ ವಿರೋಧ ಪಕ್ಷದ ಸದಸ್ಯರು ಸರ್ಕಾರದ ನಿಲುವನ್ನು ಪ್ರತಿಭಟಿಸಿ ಸಭಾತ್ಯಾಗ ಮಾಡಿದರು.
ವೀರೇಂದ್ರ ಪಾಟೀಲ್, ಎಸ್. ನಿಜಲಿಂಗಪ್ಪ ಮತ್ತು ಚನ್ನಬಸಪ್ಪ ಕಾಲದಲ್ಲಿ ನಡೆದ ಅಕ್ರಮಗಳ ತನಿಖೆ ನಡೆಯಬೇಕೆಂದು ಒತ್ತಾಯ ಮಾಡಿದ ವಿರೋಧ ಪಕ್ಷದ ಸದಸ್ಯರು, ನ್ಯಾಯಾಂಗ ವಿಚಾರಣೆಗೆ ಆಯೋಗ ರಚಿಸಬೇಕೆಂದು ಒತ್ತಾಯ ಮಾಡಿದರು.
ಮದರಾಸು ಕರ್ನಾಟಕದ ಧಾರ್ಮಿಕ ದತ್ತಿ ದೇವಾಲಯಗಳ ಜಮೀನು ಕೃಷಿಕನಿಗೆ ನೀಡಲು ಮಸೂದೆ
ಬೆಂಗಳೂರು, ಜೂನ್ 20– ಹಿಂದಿನ ಮದ್ರಾಸ್ ಪ್ರಾಂತ್ಯದಲ್ಲಿದ್ದ ದಕ್ಷಿಣ ಕನ್ನಡ, ಬಳ್ಳಾರಿ ಮತ್ತು ಕೊಳ್ಳೇಗಾಲದ ದೇವಸ್ಥಾನ ಹಾಗೂ ಇನ್ನಿತರ ಧಾರ್ಮಿಕ ದತ್ತಿ ಜಮೀನುಗಳನ್ನು ವಶಪಡಿಸಿಕೊಂಡು, ಉಳುವವರಿಗೆ ವಹಿಸಿಕೊಡಲು ಅವಕಾಶ ಮಾಡಿಕೊಡುವ ವಿಧೇಯಕ ಇದೀಗ ಸಿದ್ಧವಾಗುತ್ತಿದೆ.
ಮುಂಬೈ ಮತ್ತು ಹೈದರಾಬಾದ್ ಕರ್ನಾಟಕ ಪ್ರದೇಶಗಳ ಧಾರ್ಮಿಕ ದತ್ತಿ ಇನಾಂಗಳನ್ನು ರದ್ದು ಮಾಡುವ ವಿಧೇಯಕವನ್ನು ಚರ್ಚೆಗೆಂದು ಇಂದು ವಿಧಾನಸಭೆಯಲ್ಲಿ ಮಂಡಿಸಿದಾಗ ಕಂದಾಯ ಮಂತ್ರಿ ಶ್ರೀ ಎನ್. ಹುಚ್ಚಮಾಸ್ತಿ ಗೌಡ ಅವರು ಈ ವಿಷಯವನ್ನು ತಿಳಿಸಿದರು.