ಪಿ.ಯು. ಮಂಡಳಿ ಈ ಬಾರಿ ಅವಸರದಿಂದ ಫಲಿತಾಂಶ ಪ್ರಕಟಿಸಿರುವುದರಿಂದ ವಿಪರೀತ ಎಡವಟ್ಟುಗಳು ಕಂಡುಬಂದಿವೆ. ನನ್ನ ಪರಿಚಿತ ವಿದ್ಯಾರ್ಥಿನಿಗೆ ಕನ್ನಡ ವಿಷಯದಲ್ಲಿ ಕೇವಲ 10 ಅಂಕಗಳು ಬಂದಿದ್ದು, ಫೇಲ್ ಎಂದು ನಮೂದಾಗಿದೆ. ಆಕೆ ಉತ್ತರ ಪತ್ರಿಕೆಯ ಛಾಯಾಪ್ರತಿ ಪಡೆದು ನೋಡಿದಾಗ ಒಟ್ಟು ಅಂಕಗಳು 79 ಎಂದು ನಮೂದಾಗಿದೆ.
ಇಂತಹ ಎಡವಟ್ಟುಗಳು ಸೂಕ್ಷ್ಮ ಮನಸ್ಸಿನ ವಿದ್ಯಾರ್ಥಿನಿಯರ ಮೇಲೆ ತೀವ್ರ ಪರಿಣಾಮ ಬೀರುತ್ತವೆ. ಅದಕ್ಕೆ ಯಾರು ಹೊಣೆ? ಮೌಲ್ಯಮಾಪಕರ ಬೇಜವಾಬ್ದಾರಿಯಿಂದ ಅನೇಕ ವೇಳೆ ಇಂತಹ ಎಡವಟ್ಟುಗಳು ಆಗುತ್ತವೆ. ಆದರೂ ವಿದ್ಯಾರ್ಥಿಗಳು ಹಣ ಕಟ್ಟಿ ಛಾಯಾಪ್ರತಿ ತರಿಸಿಕೊಳ್ಳಬೇಕಿದೆ.
ಒಂದು ವೇಳೆ ತಪ್ಪು ಮೌಲ್ಯಮಾಪಕರದ್ದು ಎಂದು ಸಾಬೀತಾದರೆ, ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು. ಜೊತೆಗೆ, ನೊಂದ ವಿದ್ಯಾರ್ಥಿಗಳು ಛಾಯಾ ಪ್ರತಿಗಾಗಿ ಸಲ್ಲಿಸಿದ್ದ ಶುಲ್ಕವನ್ನು ಹಿಂದಿರುಗಿಸುವ ವ್ಯವಸ್ಥೆ ಮಾಡಬೇಕು.