ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಪರಿಕಲ್ಪನೆಯಾದ ‘ಪುರ’ (PURA: Provision of Urban Amenities to Rural Areas) ಯೋಜನೆಯನ್ನು ಸಾಕಾರಗೊಳಿಸಲು ಇದು ಸಕಾಲ. ಕೋವಿಡ್-19 ಕಾರಣದಿಂದ ಲಕ್ಷಾಂತರ ಯುವಕರು ತಮ್ಮ ಉದ್ಯೋಗ ಬಿಟ್ಟು ಸ್ವಗ್ರಾಮಗಳಿಗೆ ತೆರಳಿದ್ದಾರೆ. ದುಡಿಯುವ ಹಂಬಲ, ಉತ್ಸಾಹ, ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ಛಲ ಅವರಲ್ಲಿದೆ. ಆದರೆ ಅವರಿಗೆ ಅಗತ್ಯವಾದ ಮೂಲಸೌಕರ್ಯಗಳು ಗ್ರಾಮೀಣ ಪ್ರದೇಶದಲ್ಲಿ ದೊರೆಯುತ್ತಿಲ್ಲ. ಇದರಿಂದ ಪುನಃ ನಗರದ ಕಡೆಗೆ ಮುಖ ಮಾಡಬೇಕಾದ ಅನಿವಾರ್ಯ ಸ್ಥಿತಿಯಲ್ಲಿ ಅವರಿದ್ದಾರೆ.