ಇತ್ತೀಚೆಗೆ ‘ಶೂಟೌಟ್’ ಮಾತನ್ನಾಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಭಾವಾವೇಶಕ್ಕೊಳಗಾಗಿ ಸಡಿಲ ಮಾತುಗಳನ್ನಾಡಿರುವುದು ಇದೇ ಮೊದಲ ಸಲವೇನಲ್ಲ. ‘ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು’, ‘ಮಾತಿನಿಂ ನಗೆನುಡಿಯು, ಮಾತಿನಿಂ ಹಗೆಹೊಲೆಯು’. ಆದ್ದರಿಂದ ಮಾತಿನಲ್ಲಿ ಆವೇಶ ನುಸುಳದಂತೆ ಮುಖ್ಯಮಂತ್ರಿ ಆತ್ಮನಿಗ್ರಹ ಸಾಧಿಸುವುದು ಅಗತ್ಯ. ‘ನಾನು ಮುಖ್ಯಮಂತ್ರಿಯಾಗಿ ಮಾತನಾಡಿದ್ದಲ್ಲ’ ಎಂಬ ಸಮಜಾಯಿಷಿ ಸರಿಹೋಗುವುದಿಲ್ಲ. ಕುಮಾರಸ್ವಾಮಿ ಅವರು ದಿನದ 24 ಗಂಟೆಯೂ ರಾಜ್ಯದ ಮುಖ್ಯಮಂತ್ರಿಯೇ. ‘ರಾಜ್ಯಂ ಹಿಸುಮಹತ್ತಂತ್ರಂ ಧಾರ್ಯತೇ ನಾಕೃತಾತ್ಮಭಿಃ’ ಎನ್ನುತ್ತದೆ ಮಹಾಭಾರತ. ‘ರಾಜಕಾರ್ಯವೆಂಬುದು ಮಹತ್ತರವಾದ ಕೌಶಲ. ಜಿತೇಂದ್ರಿಯರಲ್ಲದವರಿಂದ ಅದರ ನಿರ್ವಹಣೆ ಸಾಧ್ಯವಿಲ್ಲ’ ಎಂಬುದು ಇದರ ಅರ್ಥ. ಪಂಚೇಂದ್ರಿಯಗಳಲ್ಲಿ ನಾಲಗೆಯೂ ಒಂದು. ಅದರ ನಿಗ್ರಹವು ಪ್ರತಿಯೊಬ್ಬನಲ್ಲೂ ಇರಲೇಬೇಕಾದ ಗುಣ. ಅತೀವ ಸಹನೆಯಿಂದ ಮಾತ್ರ ಈ ಗುಣವನ್ನು ಗಳಿಸಲು ಸಾಧ್ಯ. ಅವರಿವರಿಂದ ಟೀಕೆಗೊಳಗಾಗಿರುವ ‘ಮನುಸ್ಮೃತಿ’ಯೇ, ‘ಕ್ಷಾಂತ್ಯಾ ಶುದ್ಧ್ಯಂತಿ ವಿದ್ವಾಂಸೋ’ (‘ತಿಳಿವಳಿಕೆಯುಳ್ಳವರು ಸಹನೆಯಿಂದ ಶುದ್ಧರಾಗುತ್ತಾರೆ’) ಎಂದು ಹೇಳಿದೆ.