ಸುಮಾರು ಒಂದೂಕಾಲು ಗಂಟೆಯ ಸಂವಾದವನ್ನು ಪೂರ್ಣ ಗಮನಿಸಿದರೆ ಒಟ್ಟು ಚಿತ್ರಣ ದೊರಕುತ್ತದೆ. ನಾನು ಅಂದಿನ ಚರ್ಚೆಯಲ್ಲಿ ಕರಾಳ ಮತ್ತು ನಿರಾಳ ಹಾಗೂ ಸ್ವಾತಂತ್ರ್ಯ ಮತ್ತು ಸಮಾನತೆಗಳ ನಡುವೆ ಉಂಟಾಗುತ್ತಿರುವ ವೈರುಧ್ಯಗಳನ್ನು ತಾತ್ವಿಕವಾಗಿ ವಿಶ್ಲೇಷಿಸಿದೆ. ಜನರ ನಿರಾಳತೆಯನ್ನು ತುರ್ತುಪರಿಸ್ಥಿತಿ ಸಂದರ್ಭದ ಕರ್ನಾಟಕದ ಸನ್ನಿವೇಶವನ್ನು ಗಮನಿಸಿ ಹೇಳುತ್ತಿರುವುದಾಗಿ ಸ್ಪಷ್ಟಪಡಿಸಿದೆ. ತುರ್ಕ್ಮನ್ ಗೇಟ್ ಮುಂತಾದ ಕರಾಳ ಕೃತ್ಯಗಳನ್ನು ಸ್ಪಷ್ಟ ಮಾತುಗಳಲ್ಲಿ ಖಂಡಿಸಿದೆ. ಆದರೆ ಅದೇ ಸನ್ನಿವೇಶದಲ್ಲಿ ‘ಮೂಲಭೂತ ಅಗತ್ಯಗಳನ್ನು ಪಡೆದ ಜನಸಾಮಾನ್ಯರು’ ಮೂಲಭೂತ ಹಕ್ಕು ಮತ್ತು ಸ್ವಾತಂತ್ರ್ಯದ ಬಗ್ಗೆ ಯಾಕೆ ಪ್ರಶ್ನೆ ಎತ್ತಲಿಲ್ಲ ಎಂಬ ವೈರುಧ್ಯವನ್ನು ಅರ್ಥಮಾಡಿಕೊಳ್ಳುವುದು ಅಗತ್ಯವೆಂದು ಹೇಳಿದೆ. ಜೊತೆಗೆ, ಅಂದು ಅನೇಕ ದಮನಶೀಲ ಕಾರ್ಯಗಳಿಗೆ ಕಾರಣರಾದ ವಿ.ಸಿ.ಶುಕ್ಲಾ, ಜಗಮೋಹನ್ರಂಥವರನ್ನು ಆನಂತರ ತುರ್ತುಪರಿಸ್ಥಿತಿ ವಿರೋಧಿಸಿದವರು ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುವುದು ರಾಜಕೀಯ ನೈತಿಕತೆಯೆ ಎಂದೂ ಪ್ರಶ್ನಿಸಿದೆ.