ಸಮ್ಮೇಳನ ಆರಂಭಕ್ಕೆ ಮುನ್ನ, ಕನ್ನಡ ಸಂಘಟನೆಗಳ ಪದಾಧಿಕಾರಿಗಳು ಜಿಲ್ಲಾಡಳಿತದಿಂದ ಆಹ್ವಾನ ಬಂದಿಲ್ಲವೆಂದು ಗುಲ್ಲೆಬ್ಬಿಸಿದ್ದರೆ, ಆ ಎಲ್ಲ ಸಂಘಟನೆಗಳವರಿಗೆ ಭಾಷಾಜ್ಞಾನ ಕುರಿತಂತೆ ಸ್ಪರ್ಧೆ ಏರ್ಪಡಿಸುವ ಮಾತನ್ನು ಜಿಲ್ಲಾಧಿಕಾರಿ ಆಡಿದ್ದರು. ಈಗ ಪರಿಷತ್ತಿನ ಪದಾಧಿಕಾರಿಗಳಿಗೇ ಭಾಷಾ ಪರೀಕ್ಷೆ ಏರ್ಪಡಿಸುವ ಸಂದಿಗ್ಧ ಬಂದಿದೆ! ಹತ್ತಿಪ್ಪತ್ತು ಕೋಟಿ ರೂಪಾಯಿ ಖರ್ಚು ಮಾಡಿ ಸಮ್ಮೇಳನ ನಡೆಸಿದ ಮಾತ್ರಕ್ಕೆ ಭಾಷೆ ಬೆಳೆಯುವುದಿಲ್ಲ. ಬದ್ಧತೆ, ಶ್ರದ್ಧೆ, ಆಸಕ್ತಿ ಇದ್ದರಷ್ಟೇ ಕನ್ನಡ ನುಡಿಯನ್ನು ಶುದ್ಧವಾಗಿ, ಸಮಗ್ರವಾಗಿ ಬೆಳೆಸಲು ಸಾಧ್ಯ. ಮುಂದಿನ ದಿನಗಳಲ್ಲಾದರೂ ಇಂತಹ ಪ್ರಮಾದಗಳು ಆಗದಂತೆ ಪರಿಷತ್ ನಿಗಾ ವಹಿಸಲಿ.