ಸಾರ್ವತ್ರಿಕ ಚುನಾವಣೆಗಳಿರಲಿ, ಉಪಚುನಾವಣೆಗಳು ಬರಲಿ, ಎಲ್ಲ ರಾಜಕೀಯ ಪಕ್ಷಗಳ ನಾಯಕರ ಪರಸ್ಪರ ಹಳಿಯುವಿಕೆ, ಕೆಸರೆರಚಾಟ ಆರಂಭವಾಗುತ್ತದೆ. ಹಿಂದಿನದನ್ನು ನೆನಪಿಸಿಕೊಂಡು, ಮುಂದಿನದನ್ನು ಊಹಿಸಿ ಒಬ್ಬರನ್ನೊಬ್ಬರು ತಲೆಕೆಟ್ಟವರೆಂದೊ, ಬೆನ್ನಿಗೆ ಚೂರಿ ಹಾಕಿದವರೆಂದೊ ದೂಷಿಸುತ್ತಾ ಇರುತ್ತಾರೆ. ಚುನಾವಣೆ ಮುಗಿಯುವವರೆಗೂ ಇವರ ವಾಚಾಮಗೋಚರ ಬೈಗುಳಗಳನ್ನು ಕೇಳುತ್ತ, ಶಬ್ದ ಮಾಲಿನ್ಯವನ್ನು ಜನ ಸಹಿಸುತ್ತ ಇರಬೇಕಾಗುತ್ತದೆ. ಚುನಾವಣೆ ಮುಗಿದ ತರುವಾಯ ಇವರು ಎಲ್ಲವನ್ನೂ ಮರೆತು, ನಾಚಿಕೆ, ಸಂಕೋಚವನ್ನು ತೊರೆದು, ಅಧಿಕಾರಲಾಲಸೆಯಿಂದ ಹೊಂದಾಣಿಕೆ ಮಾಡಿಕೊಂಡು ಒಂದಾಗುತ್ತಾರೆ. ಇವರು ಆಡುವ ಆಟಗಳನ್ನು ನಂತರ ಜನರೇ ನಾಚಿಕೆ ಬಿಟ್ಟು ನೋಡುತ್ತಾ ಕೂಡಬೇಕಾಗುತ್ತದೆ. ಜನರ ಶೋಷಣೆ, ಜನಪ್ರತಿನಿಧಿಗಳ ಭ್ರಷ್ಟಾಚಾರ, ಸ್ವಜನಪಕ್ಷಪಾತ ಮುಂದುವರಿಯುತ್ತದೆ.