ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ವಾಚಕರ ವಾಣಿ
Published 15 ಅಕ್ಟೋಬರ್ 2023, 20:04 IST
Last Updated 15 ಅಕ್ಟೋಬರ್ 2023, 20:04 IST
ಅಕ್ಷರ ಗಾತ್ರ

ಸಹಕಾರ ಕ್ಷೇತ್ರ: ಪಾಟೀಲರಿಗೆ ಸಿಗಲಿ ಆದ್ಯತೆ

ಸಹಕಾರ ಕ್ಷೇತ್ರವು ದೇಶ ವಿದೇಶಗಳಲ್ಲಿ ಇಂದು ಅಗಾಧವಾಗಿ ಬೆಳೆದಿದೆ. ಭಾರತದಲ್ಲಿ ಕರ್ನಾಟಕವನ್ನು ಸಹಕಾರ ಕ್ಷೇತ್ರದ ತೊಟ್ಟಿಲು ಎಂದು ಕರೆಯಲಾಗುತ್ತದೆ. ದೇಶದಲ್ಲಿ ಪ್ರಥಮವಾಗಿ ಸಹಕಾರ ಸಂಘವನ್ನು ಸ್ಥಾಪಿಸಿದ ಗದಗ ತಾಲ್ಲೂಕಿನ ಸಿದ್ಧನಗೌಡ ಪಾಟೀಲ ಅವರನ್ನು ಸ್ಮರಿಸುವ ಕೆಲಸ ಆಗಬೇಕು. ಈ ದಿಸೆಯಲ್ಲಿ ರಾಜ್ಯದ ಎಲ್ಲಾ ಸಹಕಾರ ಸಂಘಗಳಲ್ಲಿ ಸಿದ್ಧನಗೌಡ ಪಾಟೀಲರ ಭಾವಚಿತ್ರ ಅಳವಡಿಸುವಂತೆ ಸರ್ಕಾರ ಆದೇಶ ಹೊರಡಿಸಬೇಕು.

ಪಾಟೀಲರ ಸ್ಮರಣಾರ್ಥ ಅಂಚೆಚೀಟಿ ಮತ್ತು ನಾಣ್ಯವನ್ನು ಕೇಂದ್ರ ಸರ್ಕಾರ ಹೊರತರಬೇಕು. ಸಹಕಾರ ಕ್ಷೇತ್ರ ಹಾಗೂ ಸಿದ್ಧನಗೌಡ ಪಾಟೀಲರ ಬಗ್ಗೆ ಶಾಲಾ ಪಠ್ಯದಲ್ಲಿ ಒಂದು ಅಧ್ಯಾಯವನ್ನು ಸೇರಿಸಬೇಕು. ಈ ಬಗ್ಗೆ ಮುಖ್ಯಮಂತ್ರಿ ಮತ್ತು ಸಹಕಾರ ಸಚಿವರು ಗಮನಹರಿಸುವುದು ಒಳಿತು.

–ಸಿ.ಪುಟ್ಟಯ್ಯ ಹಂದನಕೆರೆ, ತುಮಕೂರು

ಕಸಾಪ ತಾಲ್ಲೂಕು ಘಟಕಕ್ಕೂ ಚುನಾವಣೆ ನಡೆಯಲಿ

ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಮತ್ತು ಜಿಲ್ಲಾ ಘಟಕಗಳ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಚುನಾವಣೆಯ ಮೂಲಕ ನಡೆಯುತ್ತದೆ. ಆದರೆ ತಾಲ್ಲೂಕು ಘಟಕದ ಅಧ್ಯಕ್ಷರನ್ನು ಜಿಲ್ಲಾ ಘಟಕದ ಅಧ್ಯಕ್ಷರು ನೇಮಕ ಮಾಡುವ ಪರಿಪಾಟ ಈಗ ಚಾಲ್ತಿಯಲ್ಲಿದೆ. ಅದರ ಬದಲು, ತಾಲ್ಲೂಕು ಘಟಕದ ಅಧ್ಯಕ್ಷರನ್ನೂ ಚುನಾವಣೆಯ ಮೂಲಕವೇ ಆರಿಸುವಂತೆ ಆಗಬೇಕು. ಅಲಂಕಾರಕ್ಕಾಗಿ ತಮಗೊಂದು ಹುದ್ದೆ ಬೇಕೆಂದು ಬಯಸುವವರು ಜಿಲ್ಲಾ ಘಟಕದ ಅಧ್ಯಕ್ಷರ ಬಳಿ ಲಾಬಿ ಮಾಡಿಯೋ ವಶೀಲಿ ಹಚ್ಚಿಯೋ ತಾಲ್ಲೂಕು ಘಟಕದ ಅಧ್ಯಕ್ಷ ಸ್ಥಾನ ಗಿಟ್ಟಿಸಿಕೊಳ್ಳುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಸುಮ್ಮನೆ ಯಾರನ್ನೋ ಆ ಸ್ಥಾನದಲ್ಲಿ ತಂದು ಕೂರಿಸಿದರೆ ಏನು ಪ್ರಯೋಜನ? ಕನ್ನಡದ ಕುರಿತು ನಿಜವಾದ ಕಾಳಜಿ ಹಾಗೂ ಕಳಕಳಿಯುಳ್ಳವರು ತಾಲ್ಲೂಕು ಸಾಹಿತ್ಯ ಪರಿಷತ್ತಿಗೆ ಆಯ್ಕೆಯಾಗುವಂತೆ ಆಗಬೇಕು. ಇದಕ್ಕಾಗಿ ಅವಶ್ಯವಿದ್ದರೆ ಪರಿಷತ್ತಿನ ಬೈಲಾದಲ್ಲಿ ತಿದ್ದುಪಡಿ ತರಲಿ.

⇒ವೆಂಕಟೇಶ ಬೈಲೂರು, ಕುಮಟಾ

ಪಕ್ಷಾಂತರಿಗಳಿಗೆ ಪಾಠವಾಗಲಿ, ನಂಬಿಕೆ ಉಳಿಯಲಿ

ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ನೀಡಲಾಗಿದ್ದ ಅನುದಾನವನ್ನು ಸರ್ಕಾರ ಹಿಂಪಡೆದಿದ್ದು, ಅದನ್ನು ಮರಳಿ ಪಡೆಯಲು ಕ್ಷೇತ್ರದ ಹಾಲಿ ಶಾಸಕ ಮುನಿರತ್ನ ಅವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಕಾಲಿಗೆ ಬಿದ್ದಿರುವುದು ಕ್ಷೇತ್ರದ ಜನರಿಗೆ ಮಾಡಿರುವ ಅವಮಾನವೇ ಹೌದು. ಅಂತೆಯೇ ಅನುದಾನ ಹಿಂಪಡೆದಿರುವುದು ಕೂಡಾ ಸರಿಯಲ್ಲ. ಕಾಮಗಾರಿಗಳಲ್ಲಿ ಲೋಪಗಳಿದ್ದರೆ ತನಿಖೆ ಮಾಡಿ ಗುತ್ತಿಗೆದಾರರಿಗೆ ದಂಡ ವಿಧಿಸಲಿ ಮತ್ತು ಅಂತಹವರನ್ನು ಕಪ್ಪುಪಟ್ಟಿಗೆ ಸೇರಿಸಲಿ.

ಮುನಿರತ್ನ ಅವರು ತಾವು ಶಾಸಕರಾಗಿ ಆಯ್ಕೆಯಾಗಿದ್ದ ಕಾಂಗ್ರೆಸ್ಸಿಗೆ ಕೈಕೊಟ್ಟು, ಕಮಲದ ಆಪರೇಷನ್‌ಗೆ ತುತ್ತಾಗಿ ಬಿಜೆಪಿ ಸೇರಿದ್ದರಿಂದ ಕಾಂಗ್ರೆಸ್‌ಗೆ ಅವರ ಮೇಲೆ ಕೋಪ ಇರಬಹುದು. ಈಗ ಮುನಿರತ್ನ ಅವರ ಸ್ಥಿತಿ ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ ಎಂಬಂತೆಯೂ ಆಗಿರಬಹುದು. ಬರೀ ಅಧಿಕಾರಕ್ಕಾಗಿ ಪಕ್ಷಾಂತರ ಮಾಡಿದವರ ಪರಿಸ್ಥಿತಿ ನಿಜಕ್ಕೂ ಶೋಚನೀಯ. ಮಾಡಿದ್ದುಣ್ಣೋ ಮಹರಾಯ ಎಂದರೂ ತಪ್ಪಾಗಲಾರದು. ಹಾಗಾಗಿ, ಮುಂದಿನ ದಿನಗಳಲ್ಲಿ ಆಪರೇಷನ್‌ಗೆ ಒಳಗಾಗುವ ಅಥವಾ ಸ್ವಯಂ ಪಕ್ಷಾಂತರ ಮಾಡಲು ಚಿಂತಿಸುವ ಜನಪ್ರತಿನಿಧಿಗಳಿಗೆ ಇದೊಂದು ಪಾಠವಾಗಲಿ. ಪಕ್ಷದ ತತ್ವ, ಸಿದ್ಧಾಂತಕ್ಕೆ ಬದ್ಧರಾಗಿರಲಿ. ಅಧಿಕಾರಕ್ಕಾಗಿಯೋ ಮಂತ್ರಿಗಿರಿ ಪಡೆಯಲೋ ಪಕ್ಷದಿಂದ ಪಕ್ಷಕ್ಕೆ ಹಾರುವುದನ್ನು ಬಿಡಲಿ. ಆಗ ಮತದಾರರ ನಂಬಿಕೆಯೂ ಉಳಿದೀತು.

⇒ಪತ್ತಂಗಿ ಎಸ್. ಮುರಳಿ, ಬೆಂಗಳೂರು

ಲಂಚ ನಿಯಂತ್ರಣಕ್ಕೆ ಬೇಕು ದೃಢಸಂಕಲ್ಪ

ಸಾರ್ವಜನಿಕ ಕ್ಷೇತ್ರದಲ್ಲಿ, ಸರ್ಕಾರದ ಹಣ ಬಿಡುಗಡೆ ಆಗಬೇಕಾದ ಸಂದರ್ಭದಲ್ಲಿ ಕಮಿಷನ್- ಲಂಚ ಎಂಬುದು ಸರ್ವೇ ಸಾಮಾನ್ಯ ಆಗಿಬಿಟ್ಟಿದೆ. ಹನ್ನೆರಡು ವರ್ಷಗಳ ಹಿಂದೆ ನಾನು ನಿವೃತ್ತಿ ಹೊಂದಿದಾಗ ನಿವೃತ್ತಿ ವೇತನ, ಭತ್ಯೆಗಳನ್ನು ಪಡೆದುಕೊಳ್ಳಲು ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಯ ಮುಖಾಂತರ ಪ್ರಸ್ತಾವಗಳನ್ನು ಮಹಾಲೇಖಪಾಲರ ಕಚೇರಿಗೆ ಕಳಿಸಬೇಕಾಗಿತ್ತು. ಅದಕ್ಕಾಗಿ ಆ ಕಚೇರಿಗೆ ಹಲವಾರು ಬಾರಿ ಅಲೆದದ್ದಾಯಿತು. ಲಂಚ ಕೊಡದೆ ಕೆಲಸ ಆಗುವುದಿಲ್ಲ ಎಂದು ಖಾತರಿಯಾಯಿತು. ಒಂದು ದಿನ ಮಧ್ಯಾಹ್ನ ಉಪನಿರ್ದೇಶಕರ ಕಚೇರಿಗೆ ಹೋಗಿ, ಅಲ್ಲಿದ್ದ ಅವರ ಕೊಠಡಿಗೆ ನುಗ್ಗಿ, ಒಂದು ಕುರ್ಚಿಯಲ್ಲಿ ಕೂತು ‘ಇವತ್ತು ನನ್ನ ಎಲ್ಲಾ ಬಿಲ್‌ಗಳಿಗೆ ನೀವು ಸಹಿ ಮಾಡಿಕೊಡುವವರೆಗೂ ನಾನು ಈ ಜಾಗ ಬಿಟ್ಟು ಕದಲುವುದಿಲ್ಲ’ ಎಂದು ಪಟ್ಟುಹಿಡಿದು ಕೂತೆ. ‘ಏನು ಸತ್ಯಾಗ್ರಹನಾ’ ಎಂದು ಆ ಮಹಾಶಯ ಸಿಡುಕಿದಾಗ, ‘ಏನಾದ್ರೂ ಅಂದುಕೊಳ್ಳಿ’ ಅಂದು ಸುಮ್ಮನಾದೆ. ನನ್ನ ದಿಟ್ಟತೆಯನ್ನು ಕಂಡು ದಾರಿ ಕಾಣದೇ ಸಂಬಂಧಪಟ್ಟ ಗುಮಾಸ್ತನನ್ನು ಕರೆಸಿ, ಫೈಲ್ ತರಿಸಿಕೊಂಡು, ಎಲ್ಲಾ ಬಿಲ್‌ಗಳಿಗೂ ಸಹಿ ಮಾಡಿ, ಗೊಣಗುತ್ತಲೇ ನನ್ನ ಕೈಗೆ ಕೊಟ್ಟರು.

ಮುಂದೆ ಮಹಾಲೇಖಪಾಲರಿಂದ ನಿವೃತ್ತಿ ವೇತನ, ಭತ್ಯೆಗಳು ಮಂಜೂರಾಗಿ ಬಂದು, ಅವುಗಳಿಗೆ ಸಂಬಂಧಪಟ್ಟ ಚೆಕ್‌ನಂತಹವನ್ನು ತಾಲ್ಲೂಕು ಖಜಾನಾಧಿಕಾರಿಯಿಂದ ಪಡೆದುಕೊಳ್ಳುವ ಸಂದರ್ಭದಲ್ಲೂ ಇದೇ ವರಸೆಯನ್ನು ಪ್ರಯೋಗಿಸಿ, ಲಂಚ ಕೊಡದೆ ಎಲ್ಲವನ್ನೂ ಪಡೆದೆ. ಪ್ರಾಮಾಣಿಕತೆ ಮತ್ತು ದೃಢಸಂಕಲ್ಪದಿಂದ ಲಂಚದ ಪಿಡುಗನ್ನು ನಿಯಂತ್ರಿಸಬಹುದು ಎಂಬುದು ನನ್ನ ನಂಬಿಕೆ.

⇒ಶಿವರಾಮ್ ಎಚ್.ಎಸ್., ಮೈಸೂರು

–––

ಕವನ

ಬೀಳಲಿ ಕಡಿವಾಣ

ನಾವು ತಿಳಿದುಕೊಂಡಿದ್ದು

ಮಂಚ ಮಲಗಲು ಮಾತ್ರ ಎಂದು,

ಆದರೆ ಈಗ ಅರಿತಿದ್ದು

ಅದು ಭ್ರಷ್ಟಾಚಾರದ ಹಣ

ಬಚ್ಚಿಡುವ ಪೆಠಾರಿಯೂ

ಆಗಬಹುದು ಎಂದು,

ಭ್ರಷ್ಟಾಚಾರಕೆ ಕಡಿವಾಣ ಹಾಕದಿದ್ದರೆ

ದೇಶ ಉದ್ಧಾರವಾಗುವುದು ಎಂದು?

ಸ್ವಸ್ಥ ಸಮಾಜದ ಕನಸು

ನನಸಾಗುವುದು ಎಂದು?

 –ಸುಬ್ರಹ್ಮಣ್ಯ ನಾಡಿಗೇರ್, ಹರಿಹರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT