ಗ್ರಾಮ್ ಸಡಕ್ (ಗ್ರಾಮ ರಸ್ತೆ), ರೋಜಗಾರ್ (ಉದ್ಯೋಗ), ಲೋಕ ಅದಾಲತ್, ಪಿಂಚಣಿ ಅದಾಲತ್, ವಿದ್ಯುತ್ ಅದಾಲತ್, ಕರ್ (ಟ್ಯಾಕ್ಸ್) ಅದಾಲತ್, ಸಮ್ಮಾನ್... ಇವು ಇತ್ತೀಚೆಗೆ ಕೇಂದ್ರ ಸರ್ಕಾರದ ಒತ್ತಾಸೆಯಿಂದಲೋ ಅಥವಾ ರಾಜ್ಯ ಸರ್ಕಾರದಲ್ಲಿ ಇರುವ ಕನ್ನಡೇತರ ಹಿರಿಯ ಅಧಿಕಾರಿಗಳ ಕೃಪೆಯಿಂದಲೋ ಕರ್ನಾಟಕದ ಆಡಳಿತದಲ್ಲಿ ನುಸುಳಿರುವ ಹಿಂದಿ ಮತ್ತು ಇಂಗ್ಲಿಷ್ ಪದಗಳು. ಇವುಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಕನ್ನಡವನ್ನು ಪೂರ್ಣವಾಗಿ ನಿರ್ಲಕ್ಷಿಸಿದಂತೆ ಕಾಣುತ್ತದೆ. ಕನ್ನಡವನ್ನು ನೇಪಥ್ಯಕ್ಕೆ ಸೇರಿಸುವುದರಲ್ಲಿ ಯಾರದೇ ಕೈವಾಡ ಇರಲಿ, ಇದು ನಮ್ಮ ಜನಪ್ರತಿನಿಧಿಗಳ, ಕನ್ನಡವನ್ನು ಉಳಿಸಿ ಬೆಳೆಸಲು ದೃಢ ನಿಶ್ಚಯ ಮಾಡಿರುವ ಸರ್ಕಾರದ, ಜನಸಾಮಾನ್ಯರ ಮತ್ತು ಕನ್ನಡಪರ ಸಂಘಟನೆಗಳ ಗಮನಕ್ಕೆ ಬಾರದಿರುವುದು ತೀರಾ ಆಶ್ಚರ್ಯಕರ.