ರಾಜ್ಯದ ಆಶಾ ಕಾರ್ಯಕರ್ತೆಯರಿಗೆ ₹ 1000 ಕೋವಿಡ್ ಅಪಾಯ ಭತ್ಯೆಯನ್ನು ಕಳೆದ ಸೆಪ್ಟೆಂಬರ್ನಿಂದ ನೀಡ ಲಾಗಿಲ್ಲ ಎಂಬ ಸುದ್ದಿ ಸರ್ಕಾರಕ್ಕೆ ನಾಚಿಕೆ ತರಿಸಬೇಕು. ಕೋವಿಡ್ ಮೊದಲ ಮತ್ತು ಎರಡನೇ ಅಲೆಯ ಸಂದರ್ಭದಲ್ಲಿ ಎಲ್ಲರೂ ಬೆಚ್ಚಗೆ, ಸುರಕ್ಷಿತವಾಗಿರಲು ಮನೆ ಸೇರಿದರು. ಸ್ವಂತ ತಂದೆ, ತಾಯಿ, ಮಕ್ಕಳು ಆಸ್ಪತ್ರೆ ಸೇರಿದರೂ, ಕೊನೆಗೆ ಅವರು ಸತ್ತರೂ ಮನೆಯ ಯಾವ ಸದಸ್ಯರೂ ಅವರ ಅಂತಿಮ ದರ್ಶನ ಪಡೆಯಲು ಧೈರ್ಯ ಮಾಡಲಿಲ್ಲ. ಅಂತಹ ಸಂದರ್ಭದಲ್ಲಿ ಸರ್ಕಾರದ ಮಾತಿಗೆ ಬೆಲೆ ಕೊಟ್ಟು ಮನೆಮನೆಗೆ ಹೋಗಿ ಕೋವಿಡ್ ಸೋಂಕಿತರನ್ನು ಆಸ್ಪತ್ರೆಗೆ ಸೇರಿಸಿ, ಸ್ವಾಬ್ ಟೆಸ್ಟ್ಗೆ ಅನುಕೂಲ ಮಾಡಿ, ಸೋಂಕಿತರೆಲ್ಲರ ಮಾಹಿತಿ ಸಂಗ್ರಹಿಸಿ, ಲಸಿಕೆ ಹಾಕಿಸಿಕೊಳ್ಳಲು ಅವರ ಮನವೊಲಿಸಿದ್ದು, ಗರ್ಭಿಣಿಯರ ಆರೈಕೆ ಮಾಡಿದ್ದು ಆಶಾ ಕಾರ್ಯಕರ್ತೆಯರು. ಕೋವಿಡ್ನ ಮೊದಲೆರಡು ಅಲೆಗಳಲ್ಲಿ ಆಶಾ ಕಾರ್ಯಕರ್ತೆಯರು ‘ಮುಂಚೂಣಿಯಲ್ಲಿರುವ ಯೋಧರು’ ಎಂದಿದ್ದ ಸರ್ಕಾರ, ಇಂದು ಅವರಿಗೆ ಭತ್ಯೆ ನೀಡುವಲ್ಲಿ ಇಷ್ಟು ನಿರ್ಲಕ್ಷ್ಯ ವಹಿಸುತ್ತಿರುವುದು ದುರದೃಷ್ಟಕರ.