ಬೆಂಗಳೂರಿನ ಪ್ರಕರಣವನ್ನು ರಾಜ್ಯದ ಗೃಹ ಸಚಿವರು ಗಂಭೀರವಾಗಿ ಪರಿಗಣಿಸಬೇಕು. ಆ್ಯಸಿಡ್ ಮಾರಾಟಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಹೇರಿರುವ ನಿರ್ಬಂಧಗಳನ್ನು ಸರ್ಕಾರ ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಆ್ಯಸಿಡ್ ದಾಳಿಯ ಸಂತ್ರಸ್ತೆ ಲಕ್ಷ್ಮಿ ಅಗರವಾಲ್ ಜೀವನವನ್ನಾಧರಿಸಿದ, ದೀಪಿಕಾ ಪಡುಕೋಣೆ ನಟಿಸಿರುವ ‘ಛಪಾಕ್’ ಸಿನಿಮಾ ಬಿಡುಗಡೆಯಾದ ಹೊತ್ತಿನಲ್ಲೇ ಇಂತಹ ದಾಳಿ ನಡೆದಿರುವುದು ಹೃದಯಶೂನ್ಯ ಸಮಾಜಕ್ಕೆ ಹಿಡಿದ ಕೈಗನ್ನಡಿ. ದೀಪಿಕಾ ಅವರು ಪ್ರತಿಭಟನಾನಿರತ ಜೆಎನ್ಯು ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಿದರೆಂಬ ಕಾರಣಕ್ಕೆ ‘ಛಪಾಕ್’ ಸಿನಿಮಾವನ್ನು ಬಹಿಷ್ಕರಿಸಲು ಅಖಿಲ ಭಾರತ ಹಿಂದೂ ಮಹಾಸಭಾ ಒತ್ತಾಯಿಸಿರುವುದು ಸರಿಯಲ್ಲ. ಈ ಸಿನಿಮಾದಲ್ಲಿರುವ ಆ್ಯಸಿಡ್ ದಾಳಿ ಸಂತ್ರಸ್ತೆಯರ ನೋವಿನ ಕಥೆ, ಮಾನವೀಯ ಮಿಡಿತ ಇದ್ದವರಿಗೆ ಮಾತ್ರ ಅರ್ಥವಾಗಲು ಸಾಧ್ಯ.