‘ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಪಕ್ಷದ ನಿಷ್ಠಾವಂತ ನಾಯಕರು, ಕಾರ್ಯಕರ್ತರ ಹಿತ ಕಾಯುವಲ್ಲಿ ಎಡವಿದ್ದೇವೆ. ಇದರಿಂದ ಪಕ್ಷಕ್ಕೆ ದೊಡ್ಡಮಟ್ಟದ ಹಾನಿಯಾಗಿದೆ’ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷಎಚ್.ಡಿ. ದೇವೇಗೌಡ ಹೇಳಿರುವುದು ವರದಿಯಾಗಿದೆ (ಪ್ರ.ವಾ., ಜುಲೈ 17).
ಕಾರ್ಯಕರ್ತರ ಹಿತ ಕಾಯದೆ ಇದ್ದುದಕ್ಕಲ್ಲ, ಪಕ್ಷದ ಅಧ್ಯಕ್ಷರ ಕುಟುಂಬದ ಸ್ವಹಿತ ಮಾತ್ರ ಕಾದುದಕ್ಕೇ ಈ ಪರಿಸ್ಥಿತಿ ಎಂಬುದು ಕಣ್ಣ ಮುಂದಿರುವ ಸತ್ಯ.
ವರ್ಷದ ಹಿಂದೆ ತಮ್ಮ ಪಕ್ಷದ ಪಾಲಿಗೆ ಬಂದ ಆರು ಲೋಕಸಭಾ ಸ್ಥಾನಗಳ ಪೈಕಿ ಮೂರರಲ್ಲಿ ಅವರ ಕುಟುಂಬದವರೇ ಸ್ಪರ್ಧಿಸಿದ್ದು ಇದಕ್ಕೊಂದು ನಿದರ್ಶನ. ವರಿಷ್ಠರು ಇಳಿವಯಸ್ಸಿನಲ್ಲೂ ರಾಜ್ಯಸಭೆಗೆ ಸ್ಪರ್ಧಿಸಿ, ಅವಿರೋಧವಾಗಿ ಆಯ್ಕೆಯಾಗಿದ್ದು ಮತ್ತೊಂದು ಉದಾಹರಣೆ.
ಜೆಡಿಎಸ್ ಅಂದರೆ ಅಪ್ಪ– ಮಕ್ಕಳ ಪಕ್ಷ ಎಂಬ ಭಾವನೆ ಜನಮಾನಸದಲ್ಲಿ ನಿಂತಿದೆಯೇ ವಿನಾ, ಕರುನಾಡ ಜನರ ಹಿತ ಕಾಯುವ ಪಕ್ಷ ಎಂದಲ್ಲ. ಈ ಭಾವನೆ ಹೋಗಲಾಡಿಸಲು ಪಕ್ಷದ ವರಿಷ್ಠರು ಮೊದಲು ಗಮನಹರಿಸಲಿ. -ಪತ್ತಂಗಿ ಎಸ್. ಮುರಳಿ,ಬೆಂಗಳೂರು