‘ಒಳ ವಿಮರ್ಶಕರು ಬೇಕಾಗಿದ್ದಾರೆ’ ಎಂಬ ಬರಗೂರು ರಾಮಚಂದ್ರಪ್ಪ ಅವರ ವಿಶ್ಲೇಷಣೆಯು (ಪ್ರ.ವಾ., ಜ. 25) ಪ್ರಸ್ತುತ ಸಂದರ್ಭ, ಸನ್ನಿವೇಶಕ್ಕೆ ಅತ್ಯಗತ್ಯವಾಗಿ ಬೇಕಾಗಿರುವ ‘ಲಸಿಕೆ’ಯಂತಿದೆ. ಕೊರೊನಾ ಎಂಬ ಮಹಾ ಸಾಂಕ್ರಾಮಿಕಕ್ಕಿಂತಲೂ ನಮ್ಮೆಲ್ಲರ ಬುದ್ಧಿಗೆ, ನಡೆ-ನುಡಿಗೆ ಇಂತಹ ಲಸಿಕೆ ಅವಶ್ಯವಾಗಿ ಬೇಕಾಗಿದೆ. ‘ನಾವು ನಂಬಿದ ಧರ್ಮ, ಪಕ್ಷ, ಪಂಥಗಳ ಒಳಗಿದ್ದೂ ಹೊರಗೆ ನಿಂತು ನೋಡುವ ಒಳನೋಟ ನಮಗೆ ಬೇಕಲ್ಲವೇ’ ಎಂಬ ಲೇಖಕರ ಪ್ರಶ್ನೆ ಸಂದರ್ಭೋಚಿತವಾಗಿದೆ. ಇಂದು ಒಳನೋಟಕ್ಕಿಂತಲೂ ಅಧಿಕಾರಕ್ಕಾಗಿ, ಅಂತಸ್ತಿಗಾಗಿ, ಪುರಸ್ಕಾರಕ್ಕಾಗಿ ಆತ್ಮವಂಚಿತ, ಅನೈತಿಕ ಹಾಗೂ ಅಂಧಾಭಿಮಾನದ ಓಟವೇ ಹೆಚ್ಚಾಗುತ್ತಿದೆ. ಅಷ್ಟಕ್ಕೂ ಈ ‘ಓಟ’ ತನ್ನ ಬಲದ, ವಿವೇಚನೆಯ ಓಟವಂತೂ ಅಲ್ಲವೇ ಅಲ್ಲ ಎಂಬುದು ಸಮಾಜದ ಇಂದಿನ ವಾಸ್ತವ ಸ್ಥಿತಿಗತಿಯಿಂದ ಗೋಚರಿಸುತ್ತದೆ.