ಸರ್ಕಾರಿ ಶಾಲೆಗಳ ಅಭಿವೃದ್ಧಿಯನ್ನು ಕಡೆಗಣಿಸಿ, ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯು ಕೇವಲ ‘ಮತಬೇಟೆ’ ನಿಧಿಯಾಗಿ ಬಳಕೆಯಾಗುತ್ತಿರುವ ಕುರಿತು ವರದಿಯಾಗಿದೆ (ಪ್ರ.ವಾ., ನ. 29). ಸರ್ಕಾರದ ಎಲ್ಲ ಯೋಜನೆಗಳನ್ನು ಕಾರ್ಯಗತಗೊಳಿಸಲು ಸಂಬಂಧಿಸಿದ ಇಲಾಖೆಗಳು ಮತ್ತು ನಿಗಮಗಳೇ ಇರುವುದರಿಂದ ಪ್ರತ್ಯೇಕವಾಗಿ ಶಾಸಕರಿಗೆ ಕ್ಷೇತ್ರಾಭಿವೃದ್ಧಿ ನಿಧಿಯನ್ನು ನೀಡಿ, ಅದನ್ನು ಅವರು ತಮ್ಮ ವಿವೇಚನೆಯಂತೆ ಬಳಸಿಕೊಳ್ಳಲು ಅವಕಾಶ ಕಲ್ಪಿಸುವ ಅಗತ್ಯವಿಲ್ಲ. ಹೀಗೆ ಮಾಡಿದಾಗ, ಸಹಜವಾಗಿಯೇ ಅವರು ನಿಧಿಯನ್ನು ಮತ ಸೆಳೆಯುವ ಸಾಧನವಾಗಿ ಬಳಸಿಕೊಂಡು, ಅವಶ್ಯಕತೆ ಇಲ್ಲದಿದ್ದರೂ ತಮಗೆ ಹೆಚ್ಚು ಮತಗಳನ್ನು ತಂದುಕೊಟ್ಟಿರುವ ಭಾಗಗಳಲ್ಲಿಯೋ ಅಥವಾ ತಮ್ಮ ಹಿಂಬಾಲಕರಿಗೆ ಸಹಾಯ ಮಾಡಲೋ ಬಳಸುವ ಸಂಭವವೇ ಹೆಚ್ಚು. ಇದರಿಂದ ಒಟ್ಟಾರೆ ಕ್ಷೇತ್ರದ ಅಭಿವೃದ್ಧಿಗೆ ಧಕ್ಕೆಯಾಗುತ್ತದೆ.