ನಮ್ಮೂರ ಪ್ರತಿಷ್ಠಿತ ಮಠ ಮುರುಘಾ ಮಠ. 1991ರಲ್ಲಿ ಪಟ್ಟಕ್ಕೆ ಬಂದ ಶಿವಮೂರ್ತಿ ಸ್ವಾಮಿಗಳು ಮನುಷ್ಯನು ಮನುಷ್ಯನನ್ನು ಹೊರುವ ‘ಪಲ್ಲಕ್ಕಿ’ ತ್ಯಜಿಸಿದರು. ನಾಗರಪಂಚಮಿಯಂದು ಹಾಲನ್ನು ಕಲ್ಲು ನಾಗರಕ್ಕೆ ಎರೆಯಬೇಡಿ, ಮಕ್ಕಳಿಗೆ ಕೊಡಿ ಎಂದರು. ಮದುವೆಗಳಲ್ಲಿ ಅಕ್ಷತೆ ಹೆಸರಿನಲ್ಲಿ ಅಕ್ಕಿ ಸೂರೆ ಬೇಡ ಎಂದರು. ನನಗೆ ‘ಸ್ವಾಮಿ’ ಎಂಬ ಹಿರಿತನದ ಪಟ್ಟ ಬೇಡ ಎಂದು ಶರಣರಾದರು. ದುರ್ಗದ ತುಂಬೆಲ್ಲ ಆದರ್ಶ ವ್ಯಕ್ತಿ ಎಂದು ಕರೆಸಿಕೊಂಡರು. ಇತ್ತೀಚೆಗೆ ನೂರಾರು ಕೋಟಿ ವ್ಯಯದ ಬಸವಣ್ಣನ ಪುತ್ಥಳಿಗೆ ಕೈ ಹಾಕಿದ್ದಾರೆ. ಅದು ಹಿರಿಯ ಮಟ್ಟದ್ದು, ಪ್ರಪಂಚದಲ್ಲೇ ಎರಡನೇ ಸ್ಥಾನ ಎನ್ನುತ್ತಾರೆ. 256 ಅಡಿ ಎತ್ತರ, 120 ಟನ್ ಕಂಚಿನ ಬಳಕೆ ಈಗ ಬೇಕಿತ್ತೇ? ಮುಖ್ಯಮಂತ್ರಿಯವರ ಔದಾರ್ಯದಿಂದ ಈಗಾಗಲೇ ₹ 30 ಕೋಟಿ ಸಂದಾಯವಾಗಿದೆ ಎನ್ನುತ್ತಾರೆ. ಇದೇನು ಸರ್ಕಾರದ ಉಳಿತಾಯದ ಹಣವಲ್ಲ, ಸರ್ಕಾರಿ ಸಾಲದಲ್ಲಿ ಇದರ ಭಾರ ಪ್ರತೀ ಪ್ರಜೆಯ ಮೇಲೆ ಬೀಳಲಿದೆ. ಇದೇ ತರಹ ಇನ್ನೊಂದು ಕೂಡಲ ಸಂಗಮ ನಿರ್ಮಾಣಕ್ಕೆ ₹ 550 ಕೋಟಿ ಅಂದಾಜು ವೆಚ್ಚದ ಯೋಜನೆಗೆ ಶಂಕುಸ್ಥಾಪನೆಯಾಗಿದೆ. ಸ್ಥಾವರಕ್ಕೆ ಅಳಿವಿದೆ ಎಂದು ತಿಳಿದಿದ್ದರೂ ಈ ವ್ಯರ್ಥ ಖರ್ಚು ಏಕೆ?