ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧ್ಯಯನ ವರದಿಯ ಗಂಭೀರ ಪ್ರಮಾದ

Last Updated 19 ಡಿಸೆಂಬರ್ 2018, 4:22 IST
ಅಕ್ಷರ ಗಾತ್ರ

ರಾಜ್ಯದ ಕೈಗಾದಲ್ಲಿ ಅಣುವಿದ್ಯುತ್ತಿನಹೊಸಘಟಕಗಳ (ಐದು ಮತ್ತು ಆರು)ಸ್ಥಾಪನೆಬೇಕೆ-ಬೇಡವೇ ಎಂಬ ಚರ್ಚೆ ಇದೀಗ ಸಾಗಿದೆಯಷ್ಟೇ? ಪರಿಸರದ ಮೇಲೆ ಅವು ಬೀರಬಹುದಾದ ಪರಿಣಾಮಗಳ ಹಿನ್ನೆಲೆಯಲ್ಲಿ ಡಿಸೆಂಬರ್‌ 15ರಂದು ಸಾರ್ವಜನಿಕ ಅಹವಾಲು ಸಭೆಯೊಂದು ಕೈಗಾ ಬಳಿಯ ಮಲ್ಲಾಪುರದಲ್ಲಿ ಆಯೋಜಿತವಾಗಿತ್ತು. ಉತ್ತರ ಕನ್ನಡ ಜಿಲ್ಲಾಧಿಕಾರಿಗಳ ಉಪಸ್ಥಿತಿಯಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅದನ್ನು ಪಾರದರ್ಶಕವಾಗಿ ಹಾಗೂ ವ್ಯವಸ್ಥಿತವಾಗಿಯೇ ನಡೆಸಿತು.

ಆದರೆ, ಹೊಸ ಘಟಕಗಳನ್ನು ಸ್ಥಾಪಿಸಲು ಕೇಂದ್ರ ಪರಿಸರ ಇಲಾಖೆಯ ಅನುಮತಿಯನ್ನು ಕೋರಿ ಅಣುವಿದ್ಯುತ್ ಮಂಡಳಿಯು ಸಲ್ಲಿಸಿರುವ ಪರಿಸರ ಪರಿಣಾಮ ವರದಿ (ಇಐಎ) ಮಾತ್ರ ಅಪೂರ್ಣವೂ ಅವೈಜ್ಞಾನಿಕವೂ ಎನ್ನದೆ ವಿಧಿಯಿಲ್ಲ. ಇಲ್ಲಿನ ಜನರ ಆರೋಗ್ಯ, ಕೃಷಿ-ಹೈನುಗಾರಿಕೆ, ಕಾಳಿನದಿಯ ನೀರನ್ನು ಅವಲಂಬಿಸಿರುವ ಜನರ ಜೀವನ ಸುರಕ್ಷತೆ, ಸುತ್ತಲ ಮಳೆಕಾಡಿನ ಜೀವವೈವಿಧ್ಯ, ಪಕ್ಕದ ಅಣಶಿ ರಾಷ್ಟ್ರೀಯ ಉದ್ಯಾನವನದ ವನ್ಯಜೀವಿಗಳು- ಇವೆಲ್ಲವುಗಳ ಮೇಲೆ ಈಗಾಗಲೇ ಇರುವ ನಾಲ್ಕು ಅಣುವಿದ್ಯುತ್ ಘಟಕಗಳು ಬೀರಿರಬಹುದಾದ ಒಟ್ಟೂ ಪರಿಣಾಮಗಳನ್ನು ಮೊದಲು ಅಭ್ಯಸಿಸಿಯೇ ಮುಂದಡಿ ಇಡಬೇಕಿತ್ತು.

ಅಂಥ ಪ್ರಾಥಮಿಕ ವೈಜ್ಞಾನಿಕ ಅಧ್ಯಯನವೂ ಅದರಲ್ಲಿಲ್ಲ. ಸ್ಥಾಪಿಸಲು ಉದ್ದೇಶಿಸಿರುವ 700 ಮೆ.ವಾ. ಸಾಮರ್ಥ್ಯದ ಎರಡು ಘಟಕಗಳ ಯೋಜನಾ ವೆಚ್ಚದಲ್ಲಿ ಯುರೇನಿಯಂ ಅದಿರು ಅಗೆದು, ಶುದ್ಧೀಕರಿಸಿ, ಸಾಗಿಸುವ ವೆಚ್ಚವೂ ಸೇರಿಲ್ಲ; ಉತ್ಪಾದಿಸಿದ ವಿದ್ಯುತ್ತಿಗೆ ಬೇಕಾದ ಸಾಗಣಾಮಾರ್ಗದ ನಿರ್ಮಾಣ ವೆಚ್ಚದ ಪ್ರಸ್ತಾಪವೂ ಇಲ್ಲ! ಅಣುವಿದ್ಯುತ್ ಘಟಕಗಳ ಗರಿಷ್ಠ ಆಯುಷ್ಯ ಐವತ್ತರಿಂದ ಅರವತ್ತು ವರ್ಷಗಳಷ್ಟೇ? ಆನಂತರ ಅದನ್ನು ವ್ಯವಸ್ಥಿತವಾಗಿ ನಿಷ್ಕ್ರಿಯಗೊಳಿಸುವ ವಿಧಾನವನ್ನೂ, ಅದಕ್ಕೆ ತಗಲಬಹುದಾದ ವೆಚ್ಚವನ್ನೂ ಕೂಡಪ್ರಸ್ತಾಪಿಸಿಲ್ಲ! ಕಾಡಿನ ಮಧ್ಯದ ಕೈಗಾದಿಂದ ವಿದ್ಯುತ್ ಸಾಗಿಸಲು ನಿರ್ಮಿಸುವ ತಂತಿಮಾರ್ಗಕ್ಕೆ ಲಕ್ಷಾಂತರ ಮರಗಳನ್ನು ಕಡಿಯಬೇಕಾದ ಸಂಗತಿಯನ್ನು ಉದ್ದೇಶಪೂರ್ವಕವಾಗಿ ಮುಚ್ಚಿಡಲಾಗಿದೆ. ಇನ್ನು, ಅವಘಡ ಸಂಭವಿಸಿದಾಗ ಕೈಗೊಳ್ಳಲೇಬೇಕಾದ ಜನರ ಸ್ಥಳಾಂತರ ಹಾಗೂ ಪುನರ್ವಸತಿಯಂಥ ಅತೀ ಅವಶ್ಯ ಜವಾಬ್ದಾರಿಯನ್ನು ಜಿಲ್ಲಾಧಿಕಾರಿಗಳ ತಲೆಗೆ ಕಟ್ಟಲಾಗಿದೆ!ಇದುಪರಿಸರ ಸಂರಕ್ಷಣಾ ಕಾಯ್ದೆ (1986) ಅನ್ವಯ ಸಲ್ಲಿಸಲಾಗಿರುವಪರಿಣತರು ಕೈಗೊಂಡಿರುವವೈಜ್ಞಾನಿಕ ಅಧ್ಯಯನ ವರದಿ! ಈ ಬಗೆಯ ಗಂಭೀರ ಪ್ರಮಾದಗಳನ್ನು ಹೇಗೆ ಒಪ್ಪಿಕೊಳ್ಳುವುದು?

ಅಣುಶಕ್ತಿಯು ಪಾರಿಸರಿಕವಾಗಿ ಅಪಾಯದ್ದುಹಾಗೂ ಆರ್ಥಿಕವಾಗಿ ತೀರಾ ವೆಚ್ಚದಾಯಕವಾದದ್ದು. ಸೌರವಿದ್ಯುತ್ತಿನಂಥ ಬದಲಿ ಇಂಧನ ಬಳಕೆಯ ಕುರಿತು ಜಗತ್ತೇ ಮುಂದಡಿಯಿಡುತ್ತಿರುವಾಗ, ಇನ್ನೂ ಅಣುವಿದ್ಯುತ್ ಮೊರೆ ಹೋಗುವುದು ಸರ್ಕಾರದ ಅವೈಜ್ಞಾನಿಕಶಕ್ತಿನೀತಿಯೇ ಸರಿ. ಅಣುವಿದ್ಯುತ್ ವಿಸ್ತರಣೆ ಬೇಡ; ಕೇಂದ್ರ ಸರ್ಕಾರ ವಿವೇಕ ತೋರಲಿ.

ಡಾ. ಕೇಶವ ಎಚ್. ಕೊರ್ಸೆ,ಶಿರಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT