ಕೂಲಿ ವೇಷದಲ್ಲಿದ್ದ ‘ಎ ದರ್ಜೆ’ ಉಗ್ರ ಸುದ್ದಿ (ಪ್ರ.ವಾ., ಜೂನ್ 8) ಓದಿ ಎದೆ ಝಲ್ಲೆಂದಿತು. ಕಾಶ್ಮೀರದಿಂದ ಬಂದ ಈ ಪಾತಕಿ ನಮ್ಮ ಕರುನಾಡನ್ನು ಆಶ್ರಯಿಸಿ ಅದ್ಯಾವ ಕುಕೃತ್ಯಕ್ಕೆ ಹೊಂಚು ಹಾಕಿದ್ದನೋ ಅದೆಷ್ಟು ಜೀವಗಳ ಬಲಿಗೆ ಕಾದಿದ್ದನೋ. ಶಾಂತಿ, ಸೌಹಾರ್ದ ವಾತಾವರಣದ ಕನ್ನಡನಾಡನ್ನು ರಕ್ತಸಿಕ್ತಗೊಳಿಸುವ ದುಷ್ಟ ಮನಃಸ್ಥಿತಿಯ ಇಂತಹ ನೀಚ ಉಗ್ರರಿಗೆ ಅತ್ಯಂತ ಉಗ್ರವಾದ ಶಿಕ್ಷೆಯಾಗುವಂತೆ ಸರ್ಕಾರ ನೋಡಿಕೊಳ್ಳಲಿ. ಇಂತಹ ಇನ್ಯಾರಾದರೂ ಭಯೋತ್ಪಾದನೆಯ ಖೂಳರು ಬೆಂಗಳೂರಿನಲ್ಲಿ ಅಡಗಿದ್ದರೆ ತನಿಖೆಯಿಂದ ಅರಿಯಲಿ. ಜೊತೆಯಲ್ಲಿ ಈತನಿಗೆ ಸಹಕರಿಸಿದವರು ಹಾಗೂ ಜೊತೆಯಿದ್ದವರಿಗೂ ಕಾನೂನು ತಕ್ಕ ಪಾಠ ಕಲಿಸಲಿ.