ಪ್ರಾಚೀನ ಕಾಲದಲ್ಲಿ ಯಜ್ಞಯಾಗಾದಿಗಳ ನೆಪದಲ್ಲಿ ಕಾಡಿನ ಮರಗಿಡಗಳನ್ನು ಕಡಿದು ಬೆಂಕಿಗೆ ಹಾಕಿ, ನಾಡಿನ ಎಲ್ಲೆಗಳನ್ನು ವಿಸ್ತರಿಸುತ್ತಿದ್ದವರನ್ನು ತಡೆಗಟ್ಟಿ, ಕಾಡಿನ ಉಳಿವಿಗಾಗಿ ಹೋರಾಡುತ್ತಿದ್ದ ಬುಡಕಟ್ಟು ಜನರನ್ನು ನಾಡನ್ನಾಳುವ ಜನರು ‘ರಾಕ್ಷಸರು’ ಎಂದು ಹೆಸರಿಸಿ, ಅವರನ್ನು ಸದೆಬಡಿದರು. ವಾಲ್ಮೀಕಿ ರಾಮಾಯಣ, ವ್ಯಾಸ ಮಹಾಭಾರತ ಮತ್ತು ಹದಿನೆಂಟು ಪುರಾಣಗಳಲ್ಲಿ, ದಟ್ಟವಾದ ಅರಣ್ಯ ಪ್ರಾಂತ್ಯಗಳೇ ರಾಕ್ಷಸರ ನೆಲೆಗಳಾಗಿರುವುದು ಹೆಚ್ಚಾಗಿ ಕಂಡುಬರುತ್ತದೆ. ನಾಡನ್ನಾಳುವ ರಾಜರಿಂದ ಮತ್ತು ಅವರ ಉದ್ದೇಶಗಳಿಗೆ ಬೆಂಬಲವಾಗಿದ್ದ ಋಷಿಮುನಿಗಳಿಂದ ಕಾಡನ್ನು ಮತ್ತು ತಮ್ಮನ್ನು ತಾವು ಕಾಪಾಡಿಕೊಳ್ಳಲೆಂದು ಹೋರಾಡಿ ಪ್ರಾಣತೆತ್ತ ಬುಡಕಟ್ಟಿನ ಜನರೇ ರಾಕ್ಷಸರುಎಂಬ ವಾಸ್ತವ, ಇತಿಹಾಸವನ್ನು ಓದಿದಾಗ ತಿಳಿದು ಬರುತ್ತದೆ.