ಗಿಡಮೂಲಿಕೆ ವೈದ್ಯಕೀಯವು ನಾಡಿನ ಬಹುದೊಡ್ಡ ಪಾರಂಪರಿಕ ಆಸ್ತಿ. ಆ ವೈದ್ಯ ವಿಧಾನ ಕುರಿತ ವಿಭಿನ್ನ ಅಭಿಪ್ರಾಯಗಳು ಜಾಲತಾಣಗಳಲ್ಲಿ ಹರಿದಾಡುತ್ತಿರುವಂತೆಯೇ ಪತ್ರಿಕೆಯಲ್ಲಿ ಪ್ರಕಟವಾದ ಎರಡು ಪತ್ರಗಳು (ವಾ.ವಾ., ಸೆ. 17, 18) ಗಮನ ಸೆಳೆದವು. ಅನಧಿಕೃತ ಔಷಧಗಳನ್ನು ನಿಷೇಧಿಸಲು ಕರೆ ನೀಡಿರುವ ಪತ್ರದಲ್ಲಿ, ಯಾವ ತರಬೇತಿ ಮತ್ತು ಪರವಾನಗಿಯೂ ಇಲ್ಲದ ಪದ್ಧತಿ ಎಂದು ಕರೆಯಲಾಗಿದೆ. ಆದರೆ ನಾನು ಕಂಡಂತೆ ಮೂಲಿಕೆಗಳನ್ನು ಒಳಗೊಂಡ ಕೆಲವು ಆರೈಕೆಗಳು ಫಲ ನೀಡಿವೆ. ಹಾವು ಕಡಿತಕ್ಕೆ ಔಷಧ ಕೊಡುವ ಅನೇಕ ನಾಟಿ ವೈದ್ಯರು ಮಲೆನಾಡಿನಲ್ಲಿ ಇದ್ದಾರೆ. ಮುರಿದ ಮೂಳೆಗಳನ್ನು ಸೇರಿಸಿ ಗಿಡಮೂಲಿಕೆಗಳ ಮೂಲಕ ಮೂಲ ಚಲನವಲನಕ್ಕೆ ದೇಹ ಸ್ಪಂದಿಸುವಂತೆ ಮಾಡುವ ಗಿಡಮೂಲಿಕೆಗಳನ್ನು ಕೊಡಲಾಗುತ್ತಿದೆ.