ಬೆಂಗಳೂರಿನ ಸಾರ್ವಜನಿಕ ಸ್ಥಳಗಳಲ್ಲಿ ಜನರು ಮೂತ್ರ ವಿಸರ್ಜನೆ ಮಾಡುತ್ತಿದ್ದ ಕೆಲವು ಗೋಡೆಗಳ ಮೇಲೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ಕನ್ನಡಿ ಅಳವಡಿಸಿದೆ. ಈ ಮೂಲಕ, ಬಯಲು ಪ್ರದೇಶದಲ್ಲಿ ಮೂತ್ರ ವಿಸರ್ಜನೆ ತಡೆಯುವುದು ಅದರ ಉದ್ದೇಶ. ಇಂತಹ ಕ್ರಮದಿಂದ ರಸ್ತೆ ಬದಿಯ ಗೋಡೆಗಳ ಬಳಿ ಮೂತ್ರ ಮಾಡುವವರನ್ನು ತಡೆಯಲಾದೀತೆ? ಹೀಗೆ ಮೂತ್ರ ಮಾಡುವುದನ್ನು ತಡೆಯಲು ಗೋಡೆಗಳ ಮೇಲೆ ದೇವರುಗಳ ಚಿತ್ರಗಳನ್ನು ಹಾಗೂ ಬೆಂಗಳೂರಿನ ವೈಭವ ಬಿಂಬಿಸುವ ಚಿತ್ರಗಳನ್ನು ಬರೆಸಲಾಗಿತ್ತು. ಆದರೂ ಜನ ಜಾಗೃತರಾಗದೆ ಇಂತಹ ಚಿತ್ರಗಳ ಬಳಿಯೇ ಮೂತ್ರ ವಿಸರ್ಜಿಸುತ್ತಿದ್ದರು. ಇನ್ನು ಕನ್ನಡಿಯ ಬಳಿ ಮೂತ್ರ ಮಾಡುವುದಿಲ್ಲವೆಂಬ ಖಾತರಿ ಏನು? ಪಾಲಿಕೆ ಇಂತಹ ಕ್ರಮಗಳಿಗೆ ವಿನಿಯೋಗಿಸುವ ಹಣದಿಂದ ಅಲ್ಲಲ್ಲಿ ಶೌಚಾಲಯಗಳನ್ನು ನಿರ್ಮಿಸಿದರೆ ಸ್ವಚ್ಛ ಬೆಂಗಳೂರಿಗೆ ಅದರಿಂದ ನೆರವಾದೀತು.