ರಾಜಧಾನಿಯಲ್ಲಿ ಹೆಚ್ಚಾಗುತ್ತಿರುವ ಅಪಘಾತ ಪ್ರಕರಣಗಳನ್ನು ನಿಯಂತ್ರಿಸುವ ಸಲುವಾಗಿ, ದ್ವಿಚಕ್ರ ವಾಹನಗಳ ಎರಡೂ ಬದಿಗಳಲ್ಲಿ ಕನ್ನಡಿ ಮತ್ತು ಇಂಡಿಕೇಟರ್ಗಳನ್ನು ಪೊಲೀಸರು ಕಡ್ಡಾಯಗೊಳಿಸಿದ್ದಾರೆ. ಇಲ್ಲದಿದ್ದರೆ ₹ 500 ದಂಡ ವಿಧಿಸಲು ಬೆಂಗಳೂರು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಬಿ.ಆರ್.ರವಿಕಾಂತೇಗೌಡ ಆದೇಶ ಹೊರಡಿಸಿದ್ದಾರೆ.
ವಿಪರ್ಯಾಸವೆಂದರೆ, ರಾಜ್ಯದಲ್ಲಿ ದ್ವಿಚಕ್ರವಾಹನ ಸವಾರರು ನೆಮ್ಮದಿಯಿಂದ ವಾಹನ ಸವಾರಿ ಮಾಡಲು ಯೋಗ್ಯವಿರುವ ರಸ್ತೆಗಳೇ ಇಲ್ಲ. ರಸ್ತೆಗಳಲ್ಲಿ ಇರುವ ಗಂಡಾಂತರ ಗುಂಡಿಗಳನ್ನು ಮುಚ್ಚದೇ ತೆಪ್ಪಗಿರುವುದು ಕರ್ನಾಟಕ ಪೊಲೀಸ್ ಕಾಯ್ದೆಯ ಅನ್ವಯ ದಂಡನಾರ್ಹ ಅಪರಾಧ! ರಾಜ್ಯದಲ್ಲಿ ಗುಂಡಿರಹಿತ ರಸ್ತೆಗಳು ಹುಡುಕಿದರೂ ಸಿಗುವುದಿಲ್ಲ. ಇಂತಹ ಗುಂಡಾ-ಗುಂಡಿ ರಸ್ತೆಗಳಲ್ಲಿ ಚಲಿಸುವ ದ್ವಿಚಕ್ರವಾಹನ ಸವಾರರು ತಮ್ಮ ವಾಹನಗಳ ಎರಡೂ ಕಡೆ ಕನ್ನಡಿ ಹಾಗೂ ಇಂಡಿಕೇಟರ್ ಅಳವಡಿಸುವ ಜೊತೆಗೆ ಐಎಸ್ಐ ಗುರುತಿರುವ ಹೆಲ್ಮೆಟ್ ಧರಿಸಿ ಅದರೊಂದಿಗೆ ಬುಲೆಟ್ ಪ್ರೂಫ್ ಜಾಕೆಟ್ ತೊಟ್ಟು ಸಂಚರಿಸಿದರೂ ಕೆಲವೊಮ್ಮೆ ಅಪಘಾತಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.
ದ್ವಿಚಕ್ರ ವಾಹನ ಸವಾರರನ್ನು ಬೇಟೆಯಾಡುವುದೊಂದೇ ಪೊಲೀಸರ ಕರ್ತವ್ಯವೇ? ರಸ್ತೆಗಳು ಸುಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳುವುದು ಸಂಬಂಧಿಸಿದ ನಗರಪಾಲಿಕೆಯಜವಾಬ್ದಾರಿ. ಈ ಜವಾಬ್ದಾರಿಯನ್ನು ನಿರ್ವಹಿಸಲು ವಿಫಲವಾದಪಾಲಿಕೆಗಳವಿರುದ್ಧದೂರು ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಬೇಕಾದ ಜವಾಬ್ದಾರಿ ಪೊಲೀಸರದ್ದು. ಈ ಕೂಡಲೇ ಪೊಲೀಸ್ ಅಧಿಕಾರಿಗಳು ಎಚ್ಚೆತ್ತು, ರಾಜ್ಯದ ಎಲ್ಲಾ ರಸ್ತೆಗಳಲ್ಲಿ ಇರುವ ಒಂದೊಂದೂ ಗುಂಡಿ, ಹಳ್ಳ-ಕೊಳ್ಳಗಳ ವಿಚಾರವಾಗಿ ಸಂಬಂಧಿಸಿದ ನಗರಪಾಲಿಕೆಯವಿರುದ್ಧ ‘ಕರ್ನಾಟಕಪೊಲೀಸ್ಕಾಯ್ದೆ’ಯ ಅನ್ವಯ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಮುಲಾಜಿಲ್ಲದೇ ಕಾನೂನು ಕ್ರಮ ಜರುಗಿಸಲಿ.
- ಪಿ.ಜೆ.ರಾಘವೇಂದ್ರ, ಮೈಸೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.