ರಾಹುಲ್ ದ್ರಾವಿಡ್ ಅವರು ಜಾಹೀರಾತೊಂದರಲ್ಲಿ, ಟ್ರಾಫಿಕ್ ಜಾಮ್ ವಿರುದ್ಧ ರೌದ್ರಾವತಾರ ತಾಳಿ, ಕಾರೊಂದರ ಗಾಜನ್ನು ಒಡೆಯುವುದಕ್ಕೆ ಸಂಬಂಧಿಸಿದಂತೆ ಡಾ. ಟಿ.ಗೋವಿಂದರಾಜು ಅವರು ಬರೆದಿರುವ ಪತ್ರದಲ್ಲಿ (ವಾ.ವಾ., ಏ. 12), ಜಾಹೀರಾತಿನಲ್ಲಿ ಪಾಲ್ಗೊಳ್ಳುವ ಸೆಲೆಬ್ರಿಟಿಗಳಿಗೆ ಸಾಮಾಜಿಕ ಹೊಣೆಗಾರಿಕೆ ಇರುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಟ್ರಾಫಿಕ್ ಜಾಮ್ ಆದರೆ ಯಾರಾದರೂ ಬ್ಯಾಟ್ ಅಥವಾ ದೊಣ್ಣೆ ಬೀಸಿ ಪಕ್ಕದ ಕಾರನ್ನು ಧ್ವಂಸ ಮಾಡಿ ‘ನಾನು ರೌಡಿ’ ಎಂದು ಅಬ್ಬರಿಸಿರಿ ಎಂಬುದು ಜಾಹೀರಾತಿನ ಸಂದೇಶ ಎಂದು ಅವರು ಹೇಳಿದ್ದಾರೆ. ಅವರು ಹೇಳಿದ ಹಾಗೆ, ಟ್ರಾಫಿಕ್ ಜಾಮ್ ಉಂಟಾದರೆ ಯಾರಾದರೂ ಬ್ಯಾಟ್ ಬೀಸಿ ಯಾರದೋ ಕಾರನ್ನು ಚಚ್ಚಲು ಸಾಧ್ಯವೇ? ಜನ ಪ್ರಜ್ಞಾವಂತರಾಗಿದ್ದು, ಜಾಹೀರಾತುಗಳನ್ನು ಸ್ವೀಕರಿಸುವಾಗ ಅಷ್ಟೊಂದು ಭ್ರಾಮಕವಾಗಿ ವರ್ತಿಸುವುದಿಲ್ಲ. ಇದೇ ರಾಹುಲ್ ದ್ರಾವಿಡ್ ತಂಬಾಕು, ಸಿಗರೇಟ್ ಸೇವನೆಯಿಂದಾಗುವ ಅಪಾಯಗಳ ಬಗ್ಗೆ ಜನಜಾಗೃತಿ ಮೂಡಿಸುವ ಜಾಹೀರಾತಿನಲ್ಲಿ ಪಾಲ್ಗೊಂಡಿರುವುದನ್ನು ಮರೆಯಬಾರದು. ಸಾಮಾಜಿಕ ಹೊಣೆಗಾರಿಕೆಗೆ ಇದಕ್ಕಿಂತ ಉತ್ತಮ ಉದಾಹರಣೆ ಬೇಕೇ?