ಸಮೀಪದ ಸಾಲಿಗ್ರಾಮದಲ್ಲಿ ಕಾರಂತರು ತಮ್ಮ ಜೀವನದ ಸಂಧ್ಯಾಕಾಲವನ್ನು ಕಳೆದರು. ಅವರು ತಮ್ಮ ಕೊನೆಯ ವರ್ಷಗಳಲ್ಲಿ ವಾಸಿಸಿ, ಇಹಲೋಕ ತ್ಯಜಿಸಿದ ಮನೆಯನ್ನು ಇದೀಗ ಡಾ. ಶಿವರಾಮ ಕಾರಂತ ಸ್ಮೃತಿಚಿತ್ರ ಶಾಲೆಯಾಗಿ ಪರಿವರ್ತಿಸಲಾಗಿದೆ. ಇಲ್ಲಿ ಕಾರಂತರ ವೈಯಕ್ತಿಕ ಬದುಕಿಗೆ ಸಂಬಂಧಿಸಿದ ಎಲ್ಲ ವಸ್ತುಗಳನ್ನು ಅಚ್ಚುಕಟ್ಟಾಗಿ ಪ್ರದರ್ಶನ ಮಾಡಲಾಗಿದೆ. ಮೂರು ಅಂತಸ್ತಿನ ಬೃಹತ್ ಕಟ್ಟಡದ ಈ ಸಂಸ್ಥೆಯನ್ನು ಹಿಂದೆ ಕಾರಂತರ ಸಹಾಯಕಿಯಾಗಿ ಕೆಲಸ ಮಾಡಿದ್ದ ಮಾಲಿನಿ ಮಲ್ಯ ಅವರು ಅಪರಿಮಿತ ಕಾಳಜಿಯಿಂದ ನೋಡಿಕೊಳ್ಳುತ್ತಿದ್ದಾರೆ. ಈ ಸಂಸ್ಥೆಯನ್ನು ಏಕಾಂಗಿ ಯಾಗಿ ನಿಭಾಯಿಸುತ್ತಿರುವ ಮಾಲಿನಿ ಅವರಿಗೆ ಇದೀಗ 71 ವರ್ಷ ವಯಸ್ಸು ಹಾಗೂ ಅನಾರೋಗ್ಯ. ಈ ಕಾರಣದಿಂದ ಸಂಸ್ಥೆಯ ನಿರ್ವಹಣೆ ಸಹಜವಾಗಿ ಅವರಿಗೆ ಕಷ್ಟವಾದ ಹಿನ್ನೆಲೆಯಲ್ಲಿ, ಇದನ್ನು ಯಾವುದಾದರೂ ಸಂಘ–ಸಂಸ್ಥೆಗೆ ವಹಿಸಿಕೊಡಲು ಮಾತುಕತೆ ನಡೆಸಿರುವುದಾಗಿ ತಿಳಿಸಿದರು. ಕಲಾವಿದರು, ಸಾಹಿತಿಗಳು ನೈಸರ್ಗಿಕ ಸಂಪತ್ತಿನಂತೆ ನಾಡಿನ ಆಸ್ತಿ. ಅವರ ನೆನಪನ್ನು ಕಾಪಾಡುವುದು ಸಮಾಜದ, ಸರ್ಕಾರದ ಕರ್ತವ್ಯ. ಪ್ರಸ್ತುತ ಸಂದರ್ಭದಲ್ಲಿ ಮಾಲಿನಿ ಅವರೊಂದಿಗೆ ಚರ್ಚಿಸಿ, ರಾಜ್ಯ ಸರ್ಕಾರವೇ ಇದರ ನಿರ್ವಹಣೆಯನ್ನು ವಹಿಸಿಕೊಂಡಲ್ಲಿ ಕಡಲ ತೀರದ ಭಾರ್ಗವ ಕಾರಂತರಿಗೆ ಸೂಕ್ತ ಗೌರವ ಸಲ್ಲಿಸಿದಂತಾಗುತ್ತದೆ.