ದಶಕಗಳ ಹಿಂದೆ ಕಾಂಗ್ರೆಸ್ ಪಕ್ಷ ಆಡಳಿತ ನಡೆಸುತ್ತಿದ್ದ ಸಂದರ್ಭ. ಆಗ, ಅಗತ್ಯ ವಸ್ತುಗಳ ಬೆಲೆಯಲ್ಲಿ ಏರಿಕೆ ಉಂಟಾದಾಗ ವಿರೋಧ ಪಕ್ಷಗಳು ಒಗ್ಗಟ್ಟಾಗಿ ರಸ್ತೆಗಿಳಿದು, ಅಧಿಕಾರಾರೂಢ ಪಕ್ಷ ಬೆಚ್ಚಿ ಬೀಳುವಂತೆ ಮಾಡುತ್ತಿದ್ದವು. ವಾಜಪೇಯಿ, ಜಗನ್ನಾಥರಾವ್ ಜೋಷಿ, ಎ.ಕೆ.ಸುಬ್ಬಯ್ಯ ಅವರಂಥ ನಾಯಕರು ಕಾಂಗ್ರೆಸ್ ಪಕ್ಷದ ನಿದ್ದೆಗೆಡಿಸಿ ಸರ್ಕಾರಕ್ಕೆ ಸಡ್ಡು ಹೊಡೆಯುತ್ತಿದ್ದರು.
ಈಗ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ನಿರುದ್ಯೋಗದ ಸಮಸ್ಯೆ ಉಲ್ಬಣಿಸಿದೆ. ಆಹಾರ ಧಾನ್ಯಗಳ ಬೆಲೆ ಗಗನಕ್ಕೇರಿದೆ. ಕೇಂದ್ರದಿಂದ ತಮಗೆ ಬರಬೇಕಾದ ಅನುದಾನಕ್ಕಾಗಿ ರಾಜ್ಯ ಸರ್ಕಾರಗಳು ಕಾಡಿ–ಬೇಡಿ ಗೋಳಾಡಿದರೂ ಕೇಂದ್ರ ಸರ್ಕಾರ ಕ್ಯಾರೇ ಎನ್ನುತ್ತಿಲ್ಲ. ದೇಶದಲ್ಲಿ ಸಂವಿಧಾನದತ್ತ ಹಕ್ಕುಗಳಿಗೂ ಧಕ್ಕೆ ಉಂಟಾಗುವಂತಹ ಸ್ಥಿತಿ ಇದೆ. ಕೇಂದ್ರ ಸರ್ಕಾರವು ಸಿಬಿಐ, ಜಾರಿ ನಿರ್ದೇಶನಾಲಯ (ಇ.ಡಿ), ಸಿವಿಸಿ, ಚುನಾವಣಾ ಆಯೋಗ, ಐ.ಟಿ ಮುಂತಾದ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡು, ವಿರೋಧ ಪಕ್ಷಗಳ ನಾಯಕರನ್ನು ಹಿಡಿತದಲ್ಲಿ ಇರಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಇಂತಹ ಸ್ಥಿತಿ ಇದ್ದರೂ ಈಗ ವಿರೋಧ ಪಕ್ಷಗಳಲ್ಲಿ ಒಗ್ಗಟ್ಟು ಇಲ್ಲ. ಕಾಂಗ್ರೆಸ್ ಒಳಗೊಂಡಂತೆ ವಿರೋಧ ಪಕ್ಷಗಳು ಅಸ್ತಿತ್ವದಲ್ಲೇ ಇಲ್ಲವೇನೋ ಎಂಬಂತೆ ಕಾಣುತ್ತಿದೆ. ಕಾಂಗ್ರೆಸ್ ಪಕ್ಷವು ಆಂತರಿಕ ಗೊಂದಲಗಳಲ್ಲೇ ಮುಳುಗಿದೆ. ದೊಡ್ಡ ದೊಡ್ಡ ಸಮಸ್ಯೆಗಳ ಬಗ್ಗೆ ಕೂಡಾ ಜನರ ವಿಶ್ವಾಸ ಗಳಿಸಿ ಜನಾಂದೋಲನ ರೂಪಿಸುವಲ್ಲಿ ವಿಫಲವಾಗಿದೆ. ಈ ಸ್ಥಿತಿಯಲ್ಲಿ ಕಾಂಗ್ರೆಸ್ಗೆ ದೀವಟಿಗೆ ತೋರಿಸುವವರಾರು?
ಕೆ.ಎನ್.ಭಗವಾನ್,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.