ಡಿಸೆಂಬರ್ ತಿಂಗಳಲ್ಲಿ ಶಬರಿಮಲೆ ಅಯ್ಯಪ್ಪನ ಮಾಲೆ ಒಳಗೊಂಡಂತೆ ಕರ್ನಾಟಕದಾದ್ಯಂತ ಬೇರೆ ಬೇರೆ ರೀತಿಯ ಮಾಲೆಗಳನ್ನು ಧರಿಸುವ ಪರಿಪಾಟವಿದೆ. ಇಂತಿಷ್ಟು ದಿನ ಬೆಳಗಿನ ಜಾವ ತಣ್ಣೀರು ಸ್ನಾನ ಮಾಡಿ, ಪೂಜೆ ಮಾಡಿ ದೇವರ ಭಜನೆಯಲ್ಲಿ ಪಾಲ್ಗೊಳ್ಳುತ್ತಾರೆ. ವಿಜಯಪುರ, ಬೆಳಗಾವಿ ಭಾಗಗಳಲ್ಲಿ ಪಂಢರಾಪುರ ಮಾಲೆ, ನಾಯಕನಹಟ್ಟಿಯಲ್ಲಿ ತಿಪ್ಪೇಸ್ವಾಮಿ ಮಾಲೆ, ಬಳ್ಳಾರಿ ಭಾಗದಲ್ಲಿ ಕನಕದುರ್ಗ ಮಾಲೆ, ಕೊಟ್ಟೂರಿನಲ್ಲಿ ಕೊಟ್ಟೂರೇಶ್ವರ ಮಾಲೆ, ಹಂಪಿ ಕಮಲಾಪುರದಲ್ಲಿ ಹನುಮ ಮಾಲೆ, ಚಿಕ್ಕಮಗಳೂರು ಭಾಗದಲ್ಲಿ ದತ್ತಮಾಲೆ ಹೀಗೆ ತರಾವರಿ ಮಾಲೆಗಳಿವೆ. ಈ ವ್ರತಕ್ಕೆ ಬೇರೆ ಬೇರೆ ಕಡೆ ಬೇರೆ ಬೇರೆ ನಿಯಮಗಳಿವೆ.