ತಿಳಿದೂ ಮಾಡುವ ಕೊಲೆಗೆ ಸಮ
ಇತ್ತೀಚೆಗೆ ಶೌಚಗುಂಡಿಯಲ್ಲಿ ಮತಪಟ್ಟ ಇಬ್ಬರು ಪೌರಕಾರ್ಮಿಕರ (ಪ್ರ.ವಾ., ಡಿ. 21 ಮತ್ತು ಪ್ರ.ವಾ., ಡಿ. 22) ಬಗ್ಗೆ ತಿಳಿದು ದುಃಖವಾಗಿದೆ. ಮನುಷ್ಯರನ್ನು ಹೀಗೆ ಶೌಚಗುಂಡಿಗೆ ಇಳಿಸುವುದು ಅಪರಾಧ. ಶೌಚಗುಂಡಿಯನ್ನು ಕೇವಲ ಯಂತ್ರಗಳಿಂದ ಸ್ವಚ್ಛಪಡಿಸಬೇಕೆಂಬ ಕಾನೂನು ಇದ್ದರೂ ಸಂಬಂಧಪಟ್ಟ ಅಧಿಕಾರಿಗಳು ಈ ವಿಷಯದಲ್ಲಿ ತಲೆಕೆಡಿಸಿಕೊಳ್ಳದಿರುವುದು ವಿಷಾದದ ಸಂಗತಿ. ಇನ್ನೂ ಕೆಲವರು ಪೌರಕಾರ್ಮಿಕರಿಗೆ ‘ನಿನ್ನ ಕೆಲಸವೇ ಅದು, ನೀನು ಮಾಡಲೇಬೇಕು’ ಎಂದು ಹೇಳಿರುವುದೂ ವರದಿಯಾಗಿದೆ.
ಮೈಸೂರು, ಬೆಂಗಳೂರು ನಗರಗಳಲ್ಲೇ ಹೀಗಾದರೆ ಗ್ರಾಮಗಳ ಚಿತ್ರಣ ಹೇಗಿರಬಹುದು. ಊಹಿಸಲು ಅಸಾಧ್ಯ. ಇದರಿಂದ ರೋಸಿಹೋದ ನೊಂದ ವ್ಯಕ್ತಿಯೇನಾದರೂ ಬೇರೆ ಮತಕ್ಕೆ ಸೇರಿಕೊಂಡ ಎನ್ನಿ, ಆಗ ಇದೊಂದು ಬಲವಂತದ ಮತಾಂತರ ಎಂದು ಯಾರೋ ‘ನೈತಿಕ ಪೊಲೀಸರು’ ಕೊಟ್ಟ ದೂರಿನನ್ವಯ ಆತನನ್ನು ಮತ್ತೆ ‘ಘರ್ ವಾಪಸಿ’ ಮಾಡಿ, ‘ನಿನ್ನ ಕೆಲಸವೇ ಅದು’ ಎನ್ನುತ್ತಾ ಮತ್ತದೇ ಶೌಚಗುಂಡಿ ತೊಳಿಯಲು ಹಚ್ಚುತ್ತಾರೆ.
ಇದುವರೆಗೂ ಅನೇಕರು ಇದೇ ರೀತಿ ಸತ್ತಿದ್ದಾರೆ. ಇದು ಕಾನೂನುಬಾಹಿರ ಕೃತ್ಯವಾಗಿದ್ದು, ತಿಳಿದೂ ಮಾಡುವ ಕೊಲೆಗೆ ಸಮ. ಆದರೆ ಈವರೆಗೂ ಒಬ್ಬರಿಗಾದರೂ ಶಿಕ್ಷೆ ಆಗಿದೆಯೇ?
-ರವಿಕಿರಣ್ ಶೇಖರ್, ಬೆಂಗಳೂರು
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.