ಜನರ ಅಭಿಪ್ರಾಯಗಳು ಮತ್ತು ಸಲಹೆ- ಸೂಚನೆಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸುವ ವಿಶಾಲ ಹೃದಯ ಯಾವುದೇ ಸರ್ಕಾರಕ್ಕೆ ಇರಬೇಕಾಗುತ್ತದೆ. ಇಲ್ಲದಿದ್ದರೆ ಪ್ರಜಾತಂತ್ರ ವ್ಯವಸ್ಥೆಯನ್ನು ಗೌಣಗೊಳಿಸಿದಂತೆ, ಅಣಕ ಮಾಡಿದಂತೆ ಆಗುತ್ತದೆ. ತಮ್ಮ ಹೃದಯಕ್ಕೆ ಹತ್ತಿರವಾದ ವಿಷಯಗಳ ಜೊತೆಗೆ ಪ್ರಧಾನಿ, ಜ್ವಲಂತ ಸಮಸ್ಯೆಗಳ ನಿವಾರಣೆ ಕಡೆಗೂ ಗಮನಹರಿಸಬೇಕು. ಉದ್ಯೋಗ ಸೃಷ್ಟಿ ಒಳಗೊಂಡಂತೆ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸಲಾಗದಿರುವುದಕ್ಕೆ ಕಾರಣವಾಗಿರುವ ಅಡೆತಡೆಗಳ ಬಗ್ಗೆ ಪ್ರಾಸಂಗಿಕವಾಗಿಯಾದರೂ ಪ್ರಸ್ತಾಪಿಸಿ, ಅದಕ್ಕೆ ಸಮಂಜಸವಾದ ಸಮರ್ಥನೆ ನೀಡಿದ್ದರೆ ಜನ ಮೆಚ್ಚುತ್ತಿದ್ದರು. ತಾವು ಇಚ್ಛಿಸುವ ಕಾರ್ಯಕ್ರಮಗಳನ್ನು ಜನರ ಮೇಲೆ ಹೇರದೆ, ಜನಾಭಿಪ್ರಾಯಕ್ಕೆ ಮನ್ನಣೆ ನೀಡಿದರೆ, ಸರ್ಕಾರದ ವಿಶ್ವಾಸಾರ್ಹತೆ ಹೆಚ್ಚುತ್ತದಲ್ಲವೇ?