ಇತ್ತೀಚೆಗೆ ಬೆಂಗಳೂರಿನಲ್ಲಿ ಇಬ್ಬರು ಬಾಲಕರು ದ್ವಿಚಕ್ರ ವಾಹನ ಚಲಾಯಿಸುತ್ತಿದ್ದಾಗ ಅಪಘಾತಕ್ಕೆ ಈಡಾಗಿ ಮೃತಪಟ್ಟರು. ಅವರಲ್ಲಿ ಒಬ್ಬ ಬಾಲಕನ ಪಾಲಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಪರಿಶೀಲಿಸುವುದಾಗಿ ಪೊಲೀಸರು ಹೇಳಿದ್ದು ‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿದೆ.
ಬಾಲಕರು ದ್ವಿಚಕ್ರವಾಹನಗಳನ್ನು ಚಲಾಯಿಸುವುದು ಬೆಂಗಳೂರಿನಲ್ಲಿ ಹೊಸದಲ್ಲ. ಪೊಲೀಸರು ಇದನ್ನು ನಿರ್ಲಕ್ಷಿಸುವುದು ಮಾತ್ರ ವಿಚಿತ್ರ ವಿಷಯ. ಇದನ್ನು ಅಪರಾಧ ಎಂದು ಪರಿಗಣಿಸದೆ ಅಪಘಾತ ಸಂಭವಿಸಿದ ಬಳಿಕ ಎಚ್ಚೆತ್ತುಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ? ಇದು ಒಂದು ಬಡಾವಣೆಯ ಕಥೆ ಅಲ್ಲ. ಎಲ್ಲ ಕಡೆಗಳಲ್ಲಿ ಇದನ್ನು ಕಾಣಬಹುದು.
ಪಾಲಕರಿಗೆ ಮಕ್ಕಳ ಮೇಲೆ ಇರುವ ಮೋಹ ಅಥವಾ ಕುಟುಂಬದ ಉತ್ತಮ ಆರ್ಥಿಕ ಸ್ಥಿತಿ ಮನೆ ಮಂದಿಗೆಲ್ಲ ವಾಹನ ಖರೀದಿಗೆ ಇರುವ ಕಾರಣ ಇರಬಹುದು. ಆದರೆ ಅಮಾಯಕ ಪಾದಚಾರಿಗಳ ಕುರಿತು ಪೊಲೀಸರಿಗೆ ಕಾಳಜಿ ಇರಲಿ.