1983 ರಲ್ಲಿ ಜನತಾಪಕ್ಷ ಮತ್ತು ಕ್ರಾಂತಿರಂಗ ಒಗ್ಗೂಡಿ ‘ಜನತಾರಂಗ’ ಸರ್ಕಾರ ರಚನೆಯಾದಾಗ, ದೇವೇಗೌಡ, ಬೊಮ್ಮಾಯಿ, ಬಂಗಾರಪ್ಪ ಒತ್ತರಿಸಿ, ಧುತ್ತನೆ ದೆಹಲಿಯಿಂದ ಬಂದ ಹೆಗಡೆ ಮುಖ್ಯಮಂತ್ರಿಯಾದರು! ಆಗ ಹೆಗಡೆ ನೀಡಬಂದ ಉಪಮುಖ್ಯಮಂತ್ರಿ ಸ್ಥಾನವನ್ನು ನಿರಾಕರಿಸಿ, ‘ನಾನು – ದೇವೇಗೌಡ – ಬೊಮ್ಮಾಯಿ ಸೇರಿ ಪಕ್ಷವ ಅಧಿಕಾರಕ್ಕೆ ತಂದೆವು, ಗೆದ್ದಲು ಕಟ್ಟಿದ ಹುತ್ತಕ್ಕೆ ಹಾವು ಸೇರಿದಂತೆ ನೀವು ಮುಖ್ಯಮಂತ್ರಿಯಾಗಿದ್ದೀರ, ನನಗೆ ಮುಖ್ಯಮಂತ್ರಿ ಸ್ಥಾನವೇ ಬೇಕು, ಉಪಮುಖ್ಯಮಂತ್ರಿಯಾಗಲಾರೆ’ ಎಂದು ಸ್ವಾಭಿಮಾನಿ ಬಂಗಾರಪ್ಪ ಸಿಡಿದಿದ್ದರು!
1992 ರಲ್ಲಿ ಮೊಯಿಲಿ ಸಂಪುಟದಲ್ಲಿ ಕೃಷ್ಣ, 1996ರಲ್ಲಿ ಪಟೇಲ್ ಸಂಪುಟದಲ್ಲಿ ಮತ್ತು 2004 ರಲ್ಲಿ ಧರ್ಮಸಿಂಗ್ ಸಂಪುಟದಲ್ಲಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿಯಾಗಿದ್ದರು. ಇದೀಗ ಪರಮೇಶ್ವರ್ ಉಪಮುಖ್ಯಮಂತ್ರಿ ಸ್ಥಾನ ಕೇಳುವುದು ಉಚಿತವಾಗಿದೆ! ಸಿದ್ದರಾಮಯ್ಯನವರು ನಿರಾಕರಿಸುವುದು ಅನುಚಿತವಾಗಿದೆ! ಅಲ್ಲದೆ ಕರ್ನಾಟಕದ ಮಟ್ಟಿಗೆ ದಲಿತರೊಬ್ಬರು ಉಪಮುಖ್ಯಮಂತ್ರಿಯಾದರೆ ಇತಿಹಾಸ ನಿರ್ಮಾಣವಾಗಿ ಮುಂದೆ ಮುಖ್ಯಮಂತ್ರಿ ಪದವಿಗೆ ಬುನಾದಿಯೂ ಆಗುತ್ತದೆ! ಇದಕ್ಕೆ ಕಾಂಗ್ರೆಸ್ ಹೈಕಮಾಂಡ್ ಒಪ್ಪಬೇಕು.