ಬೆಂಗಳೂರಿನ ವೈಟ್ಫೀಲ್ಡ್ ನಾಗರಿಕರು ತಮ್ಮ ಕುಂದು ಕೊರತೆಗಳನ್ನು ಸರ್ಕಾರದ ಗಮನಕ್ಕೆ ತರಲು ನ. 30ರಂದು ಬೀದಿಗೆ ಇಳಿದಿದ್ದರು. ಆ ವೇಳೆ ಪ್ರದರ್ಶಿಸಿದ ಫಲಕಗಳಲ್ಲಿ ಕಣ್ಣಲ್ಲಿ ಎಣ್ಣೆ ಬಿಟ್ಟು ಹುಡುಕಿದರೂ ಒಂದೇ ಒಂದು ಕನ್ನಡ ಪದ ಕಾಣಸಿಗಲಿಲ್ಲ. ಕನ್ನಡ ಫಲಕ ಕಂಡು ಬರಲಿಲ್ಲ. ಅದನ್ನು ನೋಡಿದಾಗ ಪ್ರತಿಭಟನೆ ನಡೆಸಿದ್ದು ಬೆಂಗಳೂರಿನಲ್ಲೋ ಅಥವಾ ಲಂಡನ್ನಿನಲ್ಲೋ ಎಂಬ ಅನುಮಾನ ಕಾಡಿತು.
ರಸ್ತೆ ಇತ್ಯಾದಿ ಮೂಲ ಸೌಕರ್ಯಗಳ ಜವಾಬ್ದಾರಿ ಬೆಂಗಳೂರಿನ ಮಹಾನಗರ ಪಾಲಿಕೆಯದು. ಅಲ್ಲಿನ ಆಡಳಿತ ಕನ್ನಡ ಭಾಷೆಯಲ್ಲಿದೆ. ಹಾಗಿದ್ದೂ ಶಾಸ್ತ್ರಕ್ಕಾದರೂ ಒಂದೆರಡು ಕನ್ನಡ ಫಲಕಗಳಿರಬೇಡವೇ? ಅಲ್ಲಿದ್ದವರಲ್ಲಿ ಹೆಚ್ಚಿನವರು ಕನ್ನಡೇತರರು ಎಂಬುದಂತೂ ಸ್ಪಷ್ಟ. ಅವರು ಭಾರತದ ಯಾವುದೋ ರಾಜ್ಯದಿಂದ ಇಲ್ಲಿಗೆ ಬಂದಿರಬಹುದು. ಅದು ತಪ್ಪಲ್ಲ. ಆದರೆ, ಅವರ ಹುಟ್ಟೂರಿನಲ್ಲಿ ಅನ್ಯಭಾಷಿಕರು ಇಂತಹದೇ ನಡವಳಿಕೆ ತೋರಿದರೆ ಬದುಕಲು ಸಾಧ್ಯವೇ?