ಇದರಿಂದ ಹೋರಾಟಕ್ಕೆ ಹೊಸ ಆಯಾಮ ಸಿಕ್ಕಂತೆ ಆಗಿದೆ. ರೈತರ ಹೋರಾಟದಲ್ಲಿ ಬೆಳಗಾವಿಯ ಚಳಿ ಕಾಯಿಸಿಕೊಳ್ಳುವ ಧಾವಂತದಲ್ಲಿ ವಿರೋಧ ಪಕ್ಷಗಳು ಅದರಲ್ಲೂ ಬಿಜೆಪಿ, ಕೆಜೆಪಿ ಹುಯಿಲಿಡುತ್ತಿವೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಂತೂ ರಾಜನೀತಿಯ ಎಲ್ಲಾ ಘನತೆ ಗೌರವಗಳನ್ನು ಗಾಳಿಗೆ ತೂರಿ ಜನರ ದೃಷ್ಟಿಯಲ್ಲಿ ಜುಗುಪ್ಸೆಗೆ ಒಳಗಾಗಿದ್ದಾರೆ. ಇದ್ದುದರಲ್ಲಿ ಜೆಡಿಎಸ್, ಸದನದ ಕಲಾಪದ ಬಗ್ಗೆ ಆಸಕ್ತಿ ಹೊಂದಿರುವುದು ಸಮಾಧಾನಕರ.
ಸರ್ಕಾರದ ದುರುದೃಷ್ಟವೋ ಅಥವಾ ಪ್ರತಿಪಕ್ಷಗಳ ಸದವಕಾಶವೋ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವುದು ರೈತರ ಹೋರಾಟಕ್ಕೆ ಮತ್ತು ರಾಜಕಾರಣಿಗಳ ಅವಕಾಶವಾದಿತನಕ್ಕೆ ಹೊಸ ದಿಕ್ಕು ಸೃಷ್ಟಿಯಾದಂತಿದೆ. ಒಂದು ಟನ್ ಕಬ್ಬು ಬೆಳೆಯಲು ತಗಲುವ ಖರ್ಚು, ಹಾಗೆಯೇ ಒಂದು ಕ್ವಿಂಟಲ್ ಸಕ್ಕರೆ ಉತ್ಪಾದಿಸಲು ಆಗುವ ವೆಚ್ಚದ ಬಗ್ಗೆ ವೈಜ್ಞಾನಿಕ ವಿಶ್ಲೇಷಣೆ ನಡೆಯಬೇಕಿದೆ.