ಮಹತ್ವದ್ದಾದರೂ ಅತ್ಯಂತ ನಿರ್ಲಕ್ಷ್ಯಕ್ಕೊಳಗಾಗಿರುವ ಬಾಲಾರೋಪಿಗಳ ಪುನರ್ವಸತಿ ಕುರಿತು ಬರೆದಿರುವ ಸಂಪಾದಕೀಯ (ಪ್ರ.ವಾ., ಡಿ. 3) ಬೇಜವಾಬ್ದಾರಿಯುತ ಸರ್ಕಾರಕ್ಕೆ ಬೀಸಿದ ಸಕಾಲದ ಚಾಟಿಯೇಟಾಗಿದೆ.
ಮುಖ್ಯಮಂತ್ರಿ ಮತ್ತು ಮೂವರು ಪ್ರಮುಖ ಸಚಿವರು ಮೈಸೂರಿನವರಾಗಿದ್ದು, ಬಾಲಾರೋಪಿಗಳ ಸಾಮಾಜಿಕ ಪುನರ್ಮಿಲನಕ್ಕೆ ದಾರಿದೀಪವಾಗುವಂತಹ ಮಾದರಿ ವೀಕ್ಷಣಾಲಯವೊಂದನ್ನು ಈ ನಗರದಲ್ಲಿ ಸ್ಥಾಪಿಸುವುದು ಕಷ್ಟದ ವಿಚಾರವೇನಲ್ಲ. ಆದರೆ, ಕಳೆದ ಅನೇಕ ವರ್ಷಗಳಿಂದ ಮಕ್ಕಳ ಪರಿಣಾಮಕಾರಿ ಪುನರ್ವಸತಿಗೆ ಮೂಲ ಸೌಕರ್ಯಗಳಿಲ್ಲದೆ ಬಾಡಿಗೆ ಕಟ್ಟಡದಲ್ಲಿ ಮೈಸೂರಿನ ವೀಕ್ಷಣಾಲಯ ಕಾರ್ಯ ನಿರ್ವಹಿಸುತ್ತಿರುವುದು ಜನಪ್ರತಿನಿಧಿಗಳ ಕಾರ್ಯವೈಖರಿಗೆ ಹಿಡಿದ ಕನ್ನಡಿಯಾಗಿದೆ. ಜೈಲಿನಂತೆ ಇರಬಾರದೆಂದು ಬಾಲ ನ್ಯಾಯ ಕಾಯ್ದೆ ಹೇಳಿದರೂ ವೀಕ್ಷಣಾಲಯಗಳು ಜೈಲಿಗಿಂತ ಭಿನ್ನವೇನಲ್ಲ. ಮನಪರಿವರ್ತನೆ ಈ ಸಂಸ್ಥೆಯ ಮುಖ್ಯ ಗುರಿಯಾದರೂ ಅದೆಷ್ಟರ ಮಟ್ಟಿಗೆ ನಡೆಯುತ್ತಿದೆ ಎನ್ನುವುದರ ಬಗ್ಗೆ ಯಾವುದೇ ಅಧ್ಯಯನಗಳಿಲ್ಲ.
ಇಲಾಖೆಯ ಸಿಬ್ಬಂದಿ ಈ ಸಂಸ್ಥೆಗಳಿಗೆ ಬರಲು ಇಷ್ಟಪಡುವುದಿಲ್ಲ. ಬಾಲಮಂದಿರಗಳಿಗೆ ವರ್ಗಾವಣೆಯಾದರೆ ಅದನ್ನು ‘ಶಿಕ್ಷೆ’ಯೆಂದೇ ಪರಿಗಣಿಸಲಾಗುತ್ತದೆ. ಬಾಲ ನ್ಯಾಯ ಕಾಯ್ದೆಯ ಪರಿಣಾಮಕಾರಿ ಜಾರಿಗೆ ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರ ಸಮಿತಿಯೊಂದನ್ನು ರಚಿಸಿದರೂ ಅದು ಕೂಡಾ ಮುಂದೆ ಸಾಗಲಿಲ್ಲ. ಸರ್ಕಾರದ ಕಿವಿ ಹಿಂಡಬೇಕಾದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಐದು ತಿಂಗಳಾದರೂ ಅಧ್ಯಕ್ಷರು ಬಿಟ್ಟರೆ ಸದಸ್ಯರ ನೇಮಕವಾಗಲಿಲ್ಲ ಎನ್ನುವುದು ನಮ್ಮ ಮಕ್ಕಳ ದುರ್ದೈವ.